

ಬೆಂಗಳೂರು: ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಹಾಗಾಗಿ, ನೀವು ನನಗೆ ಶಾಲು, ಹೂವು ಹಾಕುವ ಬದಲಾಗಿ ಅದೇ ಹಣವನ್ನು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಅನೇಕರು ಮನೆಗೆ ಬಂದು ನನಗೆ ಶುಭ ಕೋರಿ ಶಾಲು ಹಾಕುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಸೌಕರ್ಯವಾಗಿರುವವರು ಇದ್ದರೂ ಕಾಂಗ್ರೆಸ್ ಬಡವರ ಪಕ್ಷ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಳಿ ಇರುವುದು 700 ಕೋಟಿ ರೂ. ಮಾತ್ರ. ಬಿಜೆಪಿಯಲ್ಲಿ 10 ಸಾವಿರ ಕೋಟಿ ರೂ. ಇದೆ ಎಂದರು.
ನೀವು ನನಗೆ ಶಾಲು, ಹೂವು ಹಾಕುವುದಾದರೆ ಅದರ ಬದಲು ಅದೇ ಹಣವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿ. ಆ ಮೂಲಕ ಪಕ್ಷದ ಖಜಾನೆ ತುಂಬಲಿ. 2001ರಲ್ಲಿ ಬೆಂಗಳೂರು ಪಾಲಿಕೆ ಚುನಾವಣೆ ನಡೆಸಲು ನನಗೆ ಜವಾಬ್ದಾರಿ ನೀಡಿದ್ದರು. ಹೊಟೇಲ್ ಸಿಬ್ಬಂದಿ, ಕಸ ಗುಡಿಸುವವರು ಸೇರಿದಂತೆ ಸಣ್ಣ ಸಮುದಾಯದವರಿಗೆ ಟಿಕೆಟ್ ಕೊಟ್ಟಾಗ ಎಲ್ಲರು ಆಶ್ಚರ್ಯವಾಗಿದ್ದರು.
ಆದರೆ, ಆಗ ಎಲ್ಲರೂ ಗೆದ್ದಿದ್ದರು. ನಾವು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ, ನಮಗೆ ಅಧಿಕಾರ ಸಿಗುತ್ತೋ ಇಲ್ಲವೋ ಎಂಬ ಭಾವನೆ ಬೇಡ. ಗೆಲ್ಲುವ ಅರ್ಹತೆ ಇದ್ದರೆ, ಹಣವಿಲ್ಲದಿದ್ದರೂ ನಿಮಗೆ ಟಿಕೆಟ್ ಸಿಗುವುದು ಗ್ಯಾರಂಟಿ ಎಂದು ಅವರು ಭರವಸೆ ನೀಡಿದರು.
Advertisement