

ಹುಣಸೂರು: ಕಳೆದ ಎರಡು ವರ್ಷಗಳಿಂದ ಬಿಡದೆ ಕಾಡುತ್ತಿದ್ದ ಹುಲಿಯೊಂದು ಕೊನೆಗೂ ತೋಟವೊಂದರಲ್ಲಿ ಇರಿಸಿದ್ದ ಬೋನಿನಲ್ಲಿ ಇಂದು ಬಂಧಿಯಾಗುವ ಮೂಲಕ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಹೋಬಳಿ ಕೂಡ್ಲೂರು ಗ್ರಾಮದ ಬಳಿಯ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಎಂಬುವವರಿಗೆ ಸೇರಿದ ತೋಟದಲ್ಲಿ ಇರಿಸಿದ್ದ ಬೋನಿಗೆ ಹೆಣ್ಣು ಹುಲಿ ಬಿದ್ದಿದೆ.
ಸುಮಾರು 4 ವರ್ಷದ ಹೆಣ್ಣು ಹುಲಿ ಇದಾಗಿದ್ದು, ಹುಲಿಯು ಆಗಾಗ್ಗೆ ಕಾಣಿಸಿಕೊಳುತ್ತ, ಹತ್ತಾರು ಜಾನುವಾರುಗಳನ್ನು ಕೊಂದು ಹಾಕಿತ್ತು. ರೈತರು ಈ ಭಾಗದಲ್ಲಿ ಓಡಾಡಲು ಹೆದರುತ್ತಿದ್ದರಲ್ಲದೆ ಸಂಜೆ ನಂತರ ಓಡಾಡುವುದನ್ನು ನಿಲ್ಲಿಸಿದ್ದರು.
ಗ್ರಾಮಸ್ಥರು ಹಾಗೂ ಮಾಜಿ ಶಾಸಕ ಮಂಜುನಾಥ್ ಸಹ ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಓತ್ತಡ ಹಾಕಿದ ಹಿನ್ನೆಲೆಯಲ್ಲಿ, ಹುಲಿ ಸೆರೆಗಾಗಿ ಮಂಜುನಾಥ್ ರ ತೋಟದಲ್ಲಿ ತಿಂಗಳ ಹಿಂದೆ ಬೋನ್ ಒಳಗೆ ಮೇಕೆಯೊಂದನ್ನು ಕಟ್ಟಿ ಹಾಕಲಾಗಿತ್ತು. ಬುಧವಾರ ಬೆಳಗಿನ ಜಾವ ಹುಲಿ ಮೇಕೆಯನ್ನು ಬೇಟೆಯಾಡಲು ಬಂದು ಬೋನಿನಲ್ಲಿ ಸೆರೆಯಾಗಿದೆ.
ಬೆಳಗ್ಗೆ ವಿಷಯ ತಿಳಿದ ಅಕ್ಕಪಕ್ಕದ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬರುವ ಮುನ್ನವೆ ಹುಲಿ ನೋಡಲು ತೋಟದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಪ್ರಾದೇಶಿಕ ಅರಣ್ಯ ವಿಭಾಗದ ಡಿ.ಸಿ.ಎಫ್ ಆರ್.ಟಿ.ಕಿರುಬನಂದನ್ ಆರ್.ಎಫ್.ಒ ಸಂತೋಷ್ ಹೂಗಾರ್ ನೇತೃತ್ವದ ತಂಡವು ಜನರನ್ನು ನಿಯಂತ್ರಿಸಿ, ದೂರ ಕಳುಹಿಸಿದರು.
ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಹುಲಿಗೆ ಬಂದೂಕು ಮೂಲಕ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯ ಜ್ಞಾನ ತಪ್ಪಿಸಿದ ನಂತರ ಬೋನ್ ನಿಂದ್ ಹೊರತೆಗದು ಚಿಕಿತ್ಸೆ ನೀಡಿ ನಂತರ ವಾಹನದಲ್ಲಿ ಕೊಂಡೊಯ್ದರು.
Advertisement