

ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ವಿದ್ಯುತ್ ಇಲಾಖೆ ಗ್ರಿಡ್ಗೆ ವಿದ್ಯುತ್ ಮಾರಾಟ ಮಾಡುವ ಮೂಲಕ ಒಟ್ಟು 3,685.29 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಕರ್ನಾಟಕ ಪವರ್ ಕಂಪನಿ ಲಿಮಿಟೆಡ್ (PCKL) ಮಾಹಿತಿ ಪ್ರಕಾರ, 2023-24ರಿಂದ 2026ರ ಜೂನ್ 8ರವರೆಗೆ ಒಟ್ಟು 6,531.33 ಮಿಲಿಯನ್ ಯೂನಿಟ್ಗಳಷ್ಟು (MU) ವಿದ್ಯುತ್ ನ್ನು ಪ್ರತಿ ಯೂನಿಟ್ಗೆ ಸರಾಸರಿ 5.64 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗಿದೆ. ಇದೇ ಅವಧಿಯಲ್ಲಿ 14,082.88 ಎಂಯು ವಿದ್ಯುತ್ ನ್ನು ಪ್ರತಿ ಯೂನಿಟ್ಗೆ ಸರಾಸರಿ 6.47 ರೂಪಾಯಿ ದರದಲ್ಲಿ ಖರೀದಿಸಲಾಗಿದ್ದು, ಇದಕ್ಕೆ ಒಟ್ಟು 9,111.65 ಕೋಟಿ ರೂಪಾಯಿ ವೆಚ್ಚವಾಗಿದೆ.
ಪಿಸಿಕೆಎಲ್ನ ಹಿರಿಯ ಅಧಿಕಾರಿಯೊಬ್ಬರು, ಮಳೆಗಾಲದಲ್ಲಿ, ವಿಶೇಷವಾಗಿ ಸೌರ ವಿದ್ಯುತ್ ಉತ್ಪಾದನೆಯ ಸಮಯದಲ್ಲಿ ಮಾರುಕಟ್ಟೆ ದರ ಕಡಿಮೆ ಇರುವಾಗ ಹೆಚ್ಚಿನ ಪ್ರಮಾಣದ ವಿದ್ಯುತ್ ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು. ಮತ್ತೊಂದೆಡೆ, ಬೇಸಿಗೆ ಕಾಲದಲ್ಲಿ ಬೇಡಿಕೆ ಹಾಗೂ ದರ ಎರಡೂ ಹೆಚ್ಚಿರುವ ಪೀಕ್ ಅವಧಿಯಲ್ಲಿ ಮಾತ್ರ ವಿದ್ಯುತ್ ಖರೀದಿಸಲಾಗಿದೆ. ಈ ಕಾರಣದಿಂದ ಖರೀದಿ ದರಕ್ಕಿಂತ ಮಾರಾಟದ ದರ ಕಡಿಮೆಯಾಗಿದೆ ಎಂದು ವಿವರಿಸಿದರು.
ಈಗ ನಾವು ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಿ, ಗ್ರಿಡ್ಗೆ ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸುವತ್ತ ಗಮನಹರಿಸಿದ್ದೇವೆ ಎಂದು ಹೇಳಿದರು.
2024-25ರಲ್ಲಿ ಗರಿಷ್ಠ ಪ್ರಮಾಣದ ವಿದ್ಯುತ್ ಮಾರಾಟವಾಗಿದ್ದು, ಒಟ್ಟು 3,785.25 ಎಂಯು ವಿದ್ಯುತ್ ಅನ್ನು ಪ್ರತಿ ಯೂನಿಟ್ಗೆ 5.19 ರೂ. ದರದಲ್ಲಿ ಮಾರಾಟ ಮಾಡಿ 1,965.64 ಕೋಟಿ ರೂ. ಆದಾಯ ಗಳಿಸಲಾಗಿದೆ.
ಇನ್ನು 2025-26ರಲ್ಲಿ ಗರಿಷ್ಠ ಪ್ರಮಾಣದ ವಿದ್ಯುತ್ ಖರೀದಿಸಲಾಗಿದ್ದು, 5,971.71 ಎಂಯು ವಿದ್ಯುತ್ ಅನ್ನು ಪ್ರತಿ ಯೂನಿಟ್ಗೆ 5.34 ರೂ. ದರದಲ್ಲಿ ಖರೀದಿಸಲಾಗಿದೆ. ಇದಕ್ಕಾಗಿ ಒಟ್ಟು 3,190.49 ಕೋಟಿ ರೂಪಾಯಿ ವೆಚ್ಚವಾಗಿದೆ.
2023-24ರಲ್ಲಿ 674.01 ಎಂಯು ವಿದ್ಯುತ್ ನ್ನು ಪ್ರತಿ ಯೂನಿಟ್ಗೆ 4.07 ರೂ. ದರದಲ್ಲಿ ಮಾರಾಟ ಮಾಡಿ 274.61 ಕೋಟಿ ರೂ. ಆದಾಯ ಗಳಿಸಲಾಗಿದೆ. ಇದೇ ಅವಧಿಯಲ್ಲಿ 3,311.28 ಎಂಯು ವಿದ್ಯುತ್ ಅನ್ನು ಪ್ರತಿ ಯೂನಿಟ್ಗೆ 7.63 ರೂ. ದರದಲ್ಲಿ ಖರೀದಿಸಲಾಗಿದ್ದು, ಇದರ ವೆಚ್ಚ 2,526.64 ಕೋಟಿ ರೂ. ಆಗಿದೆ.
ರಾಜ್ಯ ಸರ್ಕಾರ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಸಾಂಪ್ರದಾಯಿಕ ವಿದ್ಯುತ್ ಮೂಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಂಧನ ನೀತಿಗಳಿಗೆ ಹೊಂದಿಕೆಯಾಗಲಿದೆ. ಜೊತೆಗೆ ಕರ್ನಾಟಕಕ್ಕೆ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ಗೆ ಮಾರಾಟ ಮಾಡಲು ಸಹಕಾರಿಯಾಗಲಿದೆ.
ನಾವು ಇನ್ನಷ್ಟು ವಿದ್ಯುತ್ ನ್ನು ಗ್ರಿಡ್ಗೆ ಮಾರಾಟ ಮಾಡಬಹುದು. ಜಲವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದೇವೆ. ಪ್ರಸ್ತುತ ವಿದ್ಯುತ್ ಸಂಗ್ರಹಿಸುವುದು ಸವಾಲಾಗಿರುವುದರಿಂದ, ಅದನ್ನು ಗ್ರಿಡ್ಗೆ ಮಾರಾಟ ಮಾಡುವುದು ಉತ್ತಮ ಆಯ್ಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಅಖಿಲ ಭಾರತ ವಿದ್ಯುತ್ ಎಂಜಿನಿಯರ್ಗಳ ಒಕ್ಕೂಟದ (AIPEF) ಸದಸ್ಯರು ವಿದ್ಯುತ್ ಮಸೂದೆಗೆ ಪ್ರಸ್ತಾಪಿಸಲಾಗಿರುವ ತಿದ್ದುಪಡಿಯನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿದರು.
ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಅನುಮತಿ ಕೋರಿ ಟಾಟಾ ಪವರ್ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KERC) ಸಲ್ಲಿಸಿರುವ ಅರ್ಜಿಗೂ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಎಐಪಿಇಎಫ್ ಅಧ್ಯಕ್ಷ ಶೈಲೇಂದ್ರ ದುಬೆ, ವಿದ್ಯುತ್ ಕ್ಷೇತ್ರದ ಖಾಸಗೀಕರಣದಿಂದ ಇಡೀ ಕ್ಷೇತ್ರವೇ ಅಪಾಯದಲ್ಲಿದೆ ಎಂದು ಎಚ್ಚರಿಸಿದರು. ಒಂದೇ ಪ್ರದೇಶದಲ್ಲಿ ಅನೇಕ ವಿತರಣಾ ಪರವಾನಗಿದಾರರಿಗೆ ಅವಕಾಶ ನೀಡುವುದರಿಂದ ಖಾಸಗಿ ಕಂಪನಿಗಳು ಲಾಭದಾಯಕ ಗ್ರಾಹಕರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು, ಟಾಟಾ ಪವರ್ಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡಬಾರದು ಹಾಗೂ ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಖಾಸಗಿ ಕಂಪನಿಗಳು ಹೆಚ್ಚಿನ ಆದಾಯ ತರುವ ಗ್ರಾಹಕರನ್ನಷ್ಟೇ ಸೆಳೆಯುವುದರಿಂದ, ಸಾರ್ವಜನಿಕ ವಿದ್ಯುತ್ ಸಂಸ್ಥೆಗಳಿಗೆ ಗೃಹ ಬಳಕೆದಾರರು, ರೈತರು ಹಾಗೂ ದುರ್ಬಲ ವರ್ಗಗಳಿಗೆ ಕೈಗೆಟಕುವ ದರದಲ್ಲಿ ವಿದ್ಯುತ್ ಪೂರೈಸುವುದು ಅಸಾಧ್ಯವಾಗುತ್ತದೆ. ಆದ್ದರಿಂದ ಟಾಟಾ ಪವರ್ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
Advertisement