

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಮಧುಕೇಶ್ವರ ದೇವಾಲಯ ಮತ್ತೆ ತನ್ನ ಹಳೆಯ ವೈಭವವನ್ನು ಮರಳಿ ಪಡೆಯುತ್ತಿದೆ.
ಸುಮಾರು 1,500 ವರ್ಷಗಳ ಇತಿಹಾಸ ಹೊಂದಿರುವ ಈ ಪುರಾತನ ದೇವಾಲಯವನ್ನು ಇದೀಗ ಪುರಾತತ್ವ ಇಲಾಖೆ ಯಶಸ್ವಿಯಾಗಿ ನವೀಕರಿಸಿದೆ.
ಕರ್ನಾಟಕದ ಮೊದಲ ರಾಜವಂಶವೆಂದು ಪರಿಗಣಿಸಲ್ಪಡುವ ಕದಂಬ ರಾಜವಂಶ ಅರಸರು ನಿರ್ಮಿಸಿದ ಈ ಐತಿಹಾಸಿಕ ದೇವಾಲಯವು ಮಳೆನೀರಿನ ಸೋರಿಕೆಯಿಂದ ಹಾನಿಗೊಳಗಾಗುವ ಆತಂಕ ಎದುರಿಸುತ್ತಿತ್ತು.
ಪರಿಸ್ಥಿತಿ ಗಂಭೀರವಾಗಿದ್ದರಿಂದ ದೇವಾಲಯದ ಬಹುತೇಕ ಭಾಗವನ್ನು ತಾರ್ಪಾಲಿನ್ಗಳಿಂದ ಮುಚ್ಚಿ ಮಳೆಯಿಂದ ರಕ್ಷಿಸಲಾಗುತ್ತಿತ್ತು.
ದೇವಾಲಯದ ದುಸ್ಥಿತಿಯ ಕುರಿತು ವರದಿಗಳು ಪ್ರಕಟವಾದ ಬಳಿಕ ಎಚ್ಚೆತ್ತ ಪುರಾತತ್ವ ಇಲಾಖೆ, ಪುನಶ್ಚೇತನ ಕಾರ್ಯಕ್ಕೆ ಮುಂದಾಗಿತ್ತು. ಹಲವು ಹಂತಗಳಲ್ಲಿ ನಡೆದ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು, ದೇವಾಲಯದ ಗೋಪುರಕ್ಕೆ ಪಾರದರ್ಶಕ ಜಲನಿರೋಧಕ (Waterproof) ಲೇಪನವನ್ನು ಮೂರು ಹಂತಗಳಲ್ಲಿ ನಡೆಸಲಾಗಿದೆ. ಇದರಿಂದ ಮಳೆನೀರಿನ ಸೋರಿಕೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ.
ವಿಶಿಷ್ಟ ವಾಸ್ತುಶಿಲ್ಪ, ಸೂಕ್ಷ್ಮ ಶಿಲ್ಪಕಲೆ ಮತ್ತು ಐತಿಹಾಸಿಕ ಮಹತ್ವಕ್ಕಾಗಿ ಪ್ರಸಿದ್ಧವಾಗಿರುವ ಮಧುಕೇಶ್ವರ ದೇವಾಲಯವು ರಾಜ್ಯದ ಪ್ರಮುಖ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ.
ದೇವಾಲಯದಲ್ಲಿರುವ ಶಿವಲಿಂಗವು ಜೇನುಬಣ್ಣದ ಛಾಯೆಯನ್ನು ಹೊಂದಿರುವ ಕಾರಣ ಇದಕ್ಕೆ "ಮಧುಕೇಶ್ವರ" ಎಂಬ ಹೆಸರು ಬಂದಿರುವುದಾಗಿ ಹೇಳಲಾಗುತ್ತದೆ.
ಪುರಾತತ್ವ ಇಲಾಖೆಯ ಈ ಪುನಶ್ಚೇತನ ಕಾರ್ಯದಿಂದ 1,500 ವರ್ಷಗಳ ಪರಂಪರೆ ಹೊಂದಿರುವ ದೇವಾಲಯಕ್ಕೆ ಹೊಸ ಜೀವ ಸಿಕ್ಕಂತಾಗಿದ್ದು, ಭಕ್ತರು ಮತ್ತು ಇತಿಹಾಸಾಸಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
Advertisement