

ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ಬಗ್ಗೆ ಬಹಿರಂಗ ಚರ್ಚೆ ನಡೆಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ 2 ನೇ ಬಾರಿ ಪತ್ರ ಬರೆದಿದ್ದಾರೆ.
ಮೊದಲ ಪತ್ರಕ್ಕೆ ಉತ್ತರ ಬಂದಿಲ್ಲ ಎಂದು ಉಲ್ಲೇಖಿಸಿರುವ ಸಚಿವರು, 2ನೇ ಪತ್ರಕ್ಕಾದರೂ ಉತ್ತರ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ. ಜೂನ್ 27 ಕ್ಕೆ ಬೈರಮಂಗಲ ಗ್ರಾಮಕ್ಕೆ ನಾನು ಬರುತ್ತಿದ್ದೇನೆ, ನೀವು ಬಂದರೆ ಬಾಧಿತ ವರ್ಗದ ಜನರ ಸಂಕಷ್ಟಗಳನ್ನು ಆಲಿಸಿ ಪರ್ಯಾಯ ಮಾರ್ಗ ಕಂಡುಕೊಳ್ಳಬಹುದು ಎಂದು ಪತ್ರದಲ್ಲಿ ಸಚಿವರು ಉಲ್ಲೇಖಿಸಿದ್ದಾರೆ.
"ಡಿಕೆ ಶಿವಕುಮಾರ್ ಅವರೇ, ತಾವು ಜೂನ್ 22 ರಂದು ನನಗೆ ಬರೆದಿರುವ ಪತ್ರ ಮತ್ತು ನಾನು ಅದೇ ದಿನ ಉತ್ತರವಾಗಿ ಬರೆದಿರುವ ಪತ್ರದ ಕಡೆ ತಮ್ಮ ಅಧ್ಯ ಗಮನ ಸೆಳೆಯಬಯಸುತ್ತೇನೆ. ಪತ್ರವನ್ನು ತಾವು ಗಮನಿಸಿದ್ದೀರಿ ಎಂದು ಭಾವಿಸುತ್ತೇನೆ ಮತ್ತು ನನ್ನ ಈ ಪತ್ರಕ್ಕೆ ತಮ್ಮಿಂದ ಉತ್ತರದ ನಿರೀಕ್ಷೆಯಲ್ಲಿದ್ದೇನೆ " ಎಂದಿದ್ದಾರೆ.
"ಮುಂದುವರೆದು, ನನ್ನ ಪತ್ರದಲ್ಲಿ ಕಾಣಿಸಿದಂತೆ ಬಿಡದಿಯಲ್ಲಿ ರಚಿಸಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯಿಂದ ಭಾಧಿತರಾಗುವ ರೈತರು. ಕೃಷಿ ಕಾರ್ಮಿಕರು. ಹೈನುಗಾರಿಕೆಯಲ್ಲಿ ತೊಡಗಿರುವ ರೈತ ಮಹಿಳೆಯರು. ಸಣ್ಣ ಉದ್ಯಮಿಗಳು ಹಾಗೂ ಗ್ರಾಮಸ್ಥರ ಅಹವಾಲನ್ನು ಮತ್ತು ಕುಂದು ಕೊರತೆಗಳನ್ನು ಕೇಳಲು ಜೂನ್ 27 ರಂದು ನಾನು ಬೈರಮಂಗಲ ಗ್ರಾಮಕ್ಕೆ ಭೇಟಿ ನೀಡಲಿದ್ದೇನೆ"ಎಂದು ಅವರು ತಿಳಿಸಿದ್ದಾರೆ.
ಜೂನ್ 27 ರಂದು ನನ್ನ ಪ್ರವಾಸ ಕಾರ್ಯಕ್ರಮವನ್ನು ತಮ್ಮ ಅವಗಾಹನೆಗೆ ಈ ಪತ್ರದೊಂದಿಗೆ ಲಗತ್ತಿಸಿದ್ದೇನೆ. ಆದ್ದರಿಂದ, ತಾವು ಕೂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಭೈರಮಂಗಲ ಗ್ರಾಮಕ್ಕೆ ಭೇಟಿ ನೀಡಿದರೆ ನಾವಿಬ್ಬರು ಖುದ್ದಾಗಿ ಭಾದೀತ ವರ್ಗದ ಜನರ ಸಂಕಷ್ಟಗಳನ್ನು ಆಲಿಸಿ ಸ್ಥಳದಲ್ಲಿಯೇ ಪರ್ಯಾಯ ಮಾರ್ಗಗಳನ್ನು ಯೋಚಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.