

ಮಂಡ್ಯ: ಕೆಂಗಲ್ ಹನುಮಂತಯ್ಯನವರು ಜನಸೇವೆಗಾಗಿ ಕಟ್ಟಿಸಿದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ ಇಂದು ವ್ಯಾಪಾರ ಕೇಂದ್ರವಾಗಿದೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಶುಕ್ರವಾರ ಆರೋಪಿಸಿದ್ದಾರೆ.
ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಪಿ.ಎನ್. ಜವರಪ್ಪಗೌಡ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ವಿಧಾನಸೌಧ ದುಡ್ಡಿನ ಹಿಂದೆ ಓಡುತ್ತಿದೆ ಎಂದು ಹೇಳಿದರು.
ರಾಜಕಾರಣಿಗಳು ಇಂದು ಸೇವಕರಾಗಿ ಉಳಿದಿಲ್ಲ. ಶೇ. 80 ರಷ್ಟು ಶಾಸಕರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ. ವಿಧಾನಸೌಧ ಶಾಸಕರ ಖರೀದಿ ಮತ್ತು ಮಾರಾಟಕ್ಕೆ ಸಾಕ್ಷಿಯಾಗಿರುವುದು ದುರಂತ ಎಂದರು.
ಸ್ವಾತಂತ್ರ್ಯ ನಂತರ ಟಾಟಾ-ಬಿರ್ಲಾ ರಾಜಕೀಯ ಪ್ರವೇಶದ ಬಗ್ಗೆ ನೆಹರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ರಾಜಕೀಯ ಶಕ್ತಿ ಮತ್ತು ಹಣದ ಶಕ್ತಿ ಒಂದೇ ಕಡೆ ಇದ್ದರೆ ಪ್ರಜಾಪ್ರಭುತ್ವ ಮಾರಾಟವಾಗುತ್ತದೆ ಎಂದಿದ್ದರು. ಅದೀಗ ನಿಜವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದೇ ವೇಳೆ ಮಹಿಳೆಯರಿಗೆ ಮಾಸಿಕ 2,000 ರೂ. ನೀಡುವ ಗೃಹ ಲಕ್ಷ್ಮಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಎಚ್. ವಿಶ್ವನಾಥ್, ಅದರ ಬದಲಿಗೆ ಸರ್ವರಿಗೂ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ಆದ್ಯತೆ ನೀಡಬೇಕಿತ್ತು ಎಂದರು.