

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ನಿಧಿ ತಂದಿದ್ದರೂ ಮಾಜಿ ಸಚಿವ ಬಿ. ರಮಾನಾಥ್ ರೈ ಅವರು 2023ರ ಚುನಾವಣೆಯಲ್ಲಿ ಸೋತಿರುವುದು ನ್ಯಾಯವಲ್ಲ, 2028ರ ಚುನಾವಣೆಯಲ್ಲಿ ಅವರು ಮತ್ತೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ, ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಂಟ್ವಾಳದಲ್ಲಿ ನಡೆದ 15ನೇ ವರ್ಷದ ಮೂಡೂರು–ಪಡೂರು ಜೋಡುಕರೆ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, 2013ರಿಂದ 2018ರ ಅವಧಿಯನ್ನು ರಮಾನಾಥ್ ರೈ “ಸುವರ್ಣ ಯುಗ” ಎಂದು ಕರೆಯುತ್ತಾರೆ. ಆ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ಸುಮಾರು 5,000 ಕೋಟಿ ಅಭಿವೃದ್ಧಿ ಅನುದಾನ ತರಲಾಗಿತ್ತು. ಇಷ್ಟೊಂದು ಅಭಿವೃದ್ಧಿ ಮಾಡಿದರೂ ರಮಾನಾಥ ರೈ ಅವರನ್ನು ಸೋಲಿಸಿದ್ದು ಸರಿಯಲ್ಲ. ಅವರು ಸೋಲಬಾರದಿತ್ತು. ಅವರನ್ನು ಕ್ಷೇತ್ರದ ಜನ ಸೋಲಿಸಿದ್ದು ನನ್ನ ಅಭಿಪ್ರಾಯದಲ್ಲಿ ನ್ಯಾಯವಲ್ಲ ಎಂದರು.
ಕಂಬಳ ಕ್ರೀಡೆ
ಕರಾವಳಿ ಮೂಲದ ಜನಪ್ರಿಯ ಪಾರಂಪರಿಕ ಕ್ರೀಡೆ ಕಂಬಳಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಕಂಬಳ ಆಯೋಜನೆಗೆ ಅಗತ್ಯವಾದ ಆರ್ಥಿಕ ಸಹಾಯವನ್ನು ಸರ್ಕಾರದಿಂದ ನೀಡಲಾಗುತ್ತದೆ, ಕಂಬಳವು ಅತ್ಯಂತ ಜನಪ್ರಿಯ ಪಾರಂಪರಿಕ ಕ್ರೀಡೆಯಾಗಿದ್ದು, ಎಲ್ಲ ಸಮುದಾಯದ ಜನರು ಇದರಲ್ಲಿ ಭಾಗವಹಿಸುತ್ತಾರೆ. ಕಂಬಳದ ಕೋಣಗಳನ್ನು ಜನರು ತಮ್ಮ ಮಕ್ಕಳಂತೆ ಸಾಕುತ್ತಾರೆ. ವಯಸ್ಸಾದ ನಂತರವೂ ಅವುಗಳನ್ನು ಬಿಡದೆ ಜೀವಂತವಾಗಿರುವವರೆಗೂ ಸಾಕುವುದು ಇಲ್ಲಿ ಜನರು ಕೋಣಗಳ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ ಎಂದು ಸಿಎಂ ಹೇಳಿದರು.
ಕಂಬಳವನ್ನು ಮೈಸೂರು ನಗರದಲ್ಲಿಯೂ ಆಯೋಜಿಸುವ ಆಸಕ್ತಿ ವ್ಯಕ್ತವಾಗಿದೆ ಎಂದು ತಿಳಿಸಿದ ಅವರು, ಯುವಜನರಲ್ಲಿ ಈ ಪಾರಂಪರಿಕ ಕ್ರೀಡೆಯನ್ನು ಹೆಚ್ಚು ಜನಪ್ರಿಯಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಬಡವರು, ಕಾರ್ಮಿಕರು ಮತ್ತು ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ ಸಿದ್ದರಾಮಯ್ಯ, ಸಮಾಜದ ಅತಿ ಹಿಂದುಳಿದ ವರ್ಗಗಳೂ ಮುಖ್ಯಪ್ರವಾಹಕ್ಕೆ ಬರಬೇಕು ಎಂಬ ಉದ್ದೇಶದಿಂದ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
5 ಗ್ಯಾರಂಟಿ ಯೋಜನೆಗಳು
ಸಮಾಜದ ಕೊನೆಯ ವ್ಯಕ್ತಿಗೂ ಅಭಿವೃದ್ಧಿಯ ಲಾಭ ತಲುಪುವಂತೆ ಮಾಡಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Advertisement