

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಬೆಂಗಳೂರು ಸೇರಿದಂತೆ ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.ಇದರ ಪರಿಣಾಮವಾಗಿ ಹೋಟೆಲ್ ಗಳ ನಿರ್ವಹಣೆ ಕಷ್ಟವಾಗುತ್ತಿದ್ದು, ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಗಳನ್ನು ಬಂದ್ ಮಾಡಲಾಗುತ್ತಿದೆ.
ಈಮಧ್ಯೆ, ಎಲ್ಪಿಜಿ ಪೂರೈಕೆಯ ಕೊರತೆಯಿಂದಾಗಿ ನಗರದಲ್ಲಿ ಇಂದಿರಾ ಕ್ಯಾಂಟೀನ್ಗಳ ಮುಂದುವರಿಕೆಯ ಬಗ್ಗೆ ಆತಂಕ ಉಂಟಾಗಿದೆ ಎಂದು ಪುರಸಭೆಯ ಮೂಲಗಳು ಗುರುವಾರ ತಿಳಿಸಿವೆ.
ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಹಿಂದೆ 2013 ರಿಂದ 18ರವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯನ್ನು ಆರಂಭಿಸಲಾಗಿತ್ತು. ನಗರದಲ್ಲಿ ಸುಮಾರು 180 ಇಂದಿರಾ ಕ್ಯಾಂಟೀನ್ ಗಳಿವೆ.
ಇಲ್ಲಿ ನಗರದ ಬಡ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಆಹಾರ ಒದಗಿಸಲಾಗುತ್ತದೆ. ಕೇವಲ 5 ರೂ. ಉಪಹಾರ, 10 ರೂ.ಗೆ ಊಟ ಸಿಗುತಿತ್ತು. ಇಲ್ಲಿಯವರೆಗೂ ಈ ಕ್ಯಾಂಟೀನ್ ಗಳನ್ನು ನಡೆಸಲಾಗುತಿತ್ತು. ಆದರೆ, ಇದೀಗ ಇರಾನ್-ಇಸ್ರೇಲ್, ಅಮೆರಿಕ ನಡುವಿನ ಯುದ್ಧದಿಂದಾಗಿ ಸರ್ಕಾರದಿಂದ ನಡೆಸಲ್ಪಡುವ ಕ್ಯಾಂಟೀನ್ ಗಳ ಮೇಲೆ ಕರಿನೆರಳು ಬಿದ್ದಿದೆ.
ರಾಜ್ಯದಲ್ಲಿ LPG ಸಿಲಿಂಡರ್ ಬಿಕ್ಕಟ್ಟು ಮುಂದುವರೆದರೆ ಇಂದಿರಾ ಕ್ಯಾಂಟೀನ್ ನಿರ್ವಹಣೆ ಮೇಲೆ ಪರಿಣಾಮ ಬೀರಬಹುದು ಎಂದು ಕ್ಯಾಂಟೀನ್ ವೆಂಡರ್ಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಗೆ ಹೇಳಿರುವುದಾಗಿ GBA ಮೂಲಗಳು ತಿಳಿಸಿವೆ.
ವೆಂಡರ್ ಗಳು ನಮ್ಮ ಬಳಿಗೆ ಬಂದು ತಮ್ಮ ಕಷ್ಟಗಳನ್ನು ತಿಳಿಸಿದ್ದರು. ಅದರಂತೆ, LPG ಸಿಲಿಂಡರ್ ಪೂರೈಕೆಯನ್ನು ಪುನರ್ ಸ್ಥಾಪಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ಪತ್ರ ಬರೆದಿದ್ದೇವೆ. ಇಂದು ಕೂಡ ನಾವು ಸರ್ಕಾರಕ್ಕೆ ಸಮಸ್ಯೆಯನ್ನು ಪ್ರಸ್ತಾಪಿಸಿದ್ದೇವೆ ಎಂದು GBA ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ PTI ಗೆ ತಿಳಿಸಿದ್ದಾರೆ.
ಈ ಮಧ್ಯೆ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಬಂದ್ ಮಾಡುವುದಾಗಿ ವಿಧಾನಪರಿಷತ್ ಸದಸ್ಯ ಟಿ. ಎ. ಶರವಣ ತಿಳಿಸಿದ್ದಾರೆ. ಹಸಿದವರಿಗೆ ಅತಿ ಕಡಿಮೆ ಬೆಲೆಯಲ್ಲಿ ಊಟ ಹಾಗೂ ತಿಂಡಿ ಒದಗಿಸುವ ಉದ್ದೇಶದಿಂದ 2017 ರಿಂದ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ನಡೆಸಲಾಗುತ್ತಿತ್ತು. ಆದರೆ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ನಮ್ಮ ಕ್ಯಾಂಟೀನ್ ನಡೆಸುವುದು ಕಷ್ಟವಾಗುತ್ತಿದ್ದು, ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಗ್ಯಾಸ್ ಸಿಲಿಂಡರ್ ಪೂರೈಕೆ ಯಥಾ ಸ್ಥಿತಿಗೆ ಮರಳಿದ ನಂತರ ಎಂದಿನಂತೆ ಕ್ಯಾಂಟೀನ್ ಮರು ಪ್ರಾರಂಭವಾಗಲಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿ ನೀಡಿದ್ದಾರೆ.
Advertisement