

ಧಾರವಾಡ: ವಿದ್ಯಾಕಾಶಿ ಧಾರವಾಡಲ್ಲಿ ಶನಿವಾರ ಆಲಿಕಲ್ಲು ಸಹಿತ ಭಾರಿ ಮಳೆ ಆಗಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ಜನತೆಗೆ ವರುಣ ತಂಪೆರೆದಿದೆ.
ಧಾರವಾಡದ ವಿವಿಧ ಭಾಗಗಳಲ್ಲಿ ಇಂದು ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಈ ಮಳೆ ಬಿಸಿಲ ಬೇಗೆಯಿಂದ ಹೈರಾಣಾಗಿದ್ದ ಜನತೆಗೆ ತುಸು ಸಮಾಧಾನ ತಂದಿದೆ. ಆದರೆ ಗಾಳಿ ಜೋರಾಗಿ ಬೀಸುತ್ತಿರುವುದರಿಂದ ಮಾವಿನ ಬೆಳೆಗೆ ಈ ಮಳೆ ಕಂಟಕವಾಗಿದೆ.
ಧಾರವಾಡ ನಗರದ ಕರ್ನಾಟಕ ಕಾಲೇಜು(ಕೆಸಿಡಿ) ಮೈದಾನದಲ್ಲಿ ಆಯೋಜಿಸಿದ್ದ ಸಂಸದ ಮಹೋತ್ಸವದ ಕುಸ್ತಿ ಟೂರ್ನಿ ಮಳೆಯಿಂದಾಗಿ ಅರ್ಧಕ್ಕೆ ಸ್ಥಗಿತವಾಗಿದೆ.
ದಕ್ಷಿಣ ಕನ್ನಡದಲ್ಲೂ ಮಳೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ, ಧರ್ಮಸ್ಥಳದಲ್ಲಿ ಇಂದು ಸಂಜೆ ಉತ್ತಮ ಮಳೆಯಾಗಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿತ್ತು.
ಗುರುವಾಯುನಕರೆ ಪ್ರದೇಶದಲ್ಲಿ ಸಂಜೆ ವೇಳೆ ಮೋಡ ಕವಿದ ವಾತಾವರಣವಿತ್ತು. ಬಳಿಕ ಮಳೆ ಸುರಿದಿದೆ. ಕಾಜೂರು, ಕಿಲ್ಲೂರು ಕಡೆ ಗುಡುಗು ಸಿಡಿಲು ಮಾತ್ರ ಇತ್ತು.
Advertisement