

ಬೆಂಗಳೂರು: ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ರಾಮನಗರ ಸೇರಿದಂತೆ 13 ಜಿಲ್ಲೆಗಳಾದ್ಯಂತ 37 ಹೊಸ ಕೈಗಾರಿಕೆಗಳು ಮತ್ತು ಹೆಚ್ಚುವರಿ ಹೂಡಿಕೆಯ 2 ಯೋಜನೆಗಳ ಒಟ್ಟು ₹4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಶುಕ್ರವಾರ ನಡೆದ 158ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
'ಐಟಿ ಮೂಲಸೌಲಭ್ಯ, ಸಕ್ಕರೆ ಕಾರ್ಖಾನೆ, ಟೆಕ್ನಿಕಲ್ ಟೆಕ್ಸ್ಟೈಲ್, ಕಂಪ್ರೆಸ್ಡ್ ಗ್ಯಾಸ್, ವೈಮಾಂತರಿಕ್ಷ, ಚಿನ್ನಾಭರಣ ತಯಾರಿಕೆ, ಎಲೆಕ್ಟ್ರಾನಿಕ್ಸ್, ಸಾಫ್ಟ್ವೇರ್ ಹಾಗೂ ಪಂಚತಾರಾ ಹೋಟೆಲ್ ನಿರ್ಮಾಣ ಯೋಜನೆಗಳಿಗೆ ನೀಡಿರುವ ಅನುಮೋದನೆಗಳಿಂದ ರಾಜ್ಯದಲ್ಲಿ ಹೊಸದಾಗಿ 14,525 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಯೋಜನೆಗಳಲ್ಲಿ ಬಾಗ್ಮನೆ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ನ ₹494 ಕೋಟಿ ಮೊತ್ತದ ಐಟಿ ಮೂಲಸೌಲಭ್ಯ ಅಭಿವೃದ್ಧಿ, ಕರ್ನಾಟಕ ಬಂಗಾರು ಷುಗರ್ಸ್ನ ₹443 ಕೋಟಿಯ ಸಕ್ಕರೆ ಕಾರ್ಖಾನೆ, ಕ್ಲೆನೆ ಪ್ಯಾಕ್ಸ್ನ ₹376 ಕೋಟಿಯ ಟೆಕ್ನಿಕಲ್ ಟೆಕ್ಸ್ಟೈಲ್ ಘಟಕ, ತ್ರಿಶೂಲ್ ಬಿಲ್ಡ್ಟೆಕ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ನ ₹300 ಕೋಟಿ ವೆಚ್ಚದ ಪಂಚತಾರಾ ಹೋಟೆಲ್, ಮುಧೋಳದಲ್ಲಿ ಟ್ರೌಲ್ಟ್ ಗ್ರಾಸ್ನ ₹257 ಕೋಟಿ ವೆಚ್ಚದ ಕಂಪ್ರೆಸ್ಡ್ ಗ್ಯಾಸ್ ಘಟಕ, ತ್ಸುಯೊ ಮ್ಯಾನುಫ್ಯಾಕ್ಚರಿನ್ನ ₹250 ಕೋಟಿ ವೆಚ್ಚದಲ್ಲಿನ ವಿದ್ಯುತ್ಚಾಲಿತ ವಾಹನಗಳ ಮೋಟರ್ ಹಾಗೂ ಕಂಟ್ರೋಲರ್ ತಯಾರಿಕೆ ಘಟಕಗಳು ಪ್ರಮುಖವಾಗಿವೆ ಎಂದು ಸಚಿವರು ತಿಳಿಸಿದ್ದಾರೆ.
₹50 ಕೋಟಿಗೂ ಹೆಚ್ಚು ಹೂಡಿಕೆಯ 22 ಪ್ರಮುಖ ದೊಡ್ಡ ಮತ್ತು ಮಧ್ಯಮ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿರುವುದರಿಂದ ರಾಜ್ಯದಲ್ಲಿ ₹3908 ಕೋಟಿ ಹೂಡಿಕೆ ಆಗಲಿದೆ. 12,475 ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ₹15 ಕೋಟಿಗಳಿಂದ ₹50 ಕೋಟಿ ಒಳಗಿನ ಹೂಡಿಕೆಯ 15 ಹೊಸ ಯೋಜನೆಗಳಿಗೆ ನೀಡಿರುವ ಅನುಮೋದನೆ ಫಲವಾಗಿ ₹350 ಕೋಟಿ ಹೂಡಿಕೆ ಆಗಲಿದ್ದು, 1,750 ಜನರಿಗೆ ಉದ್ಯೋಗಾವಕಾಶಗಳು ಸಿಗಲಿವೆ. ಹೆಚ್ಚುವರಿ ಹೂಡಿಕೆಯ 2 ಯೋಜನೆಗಳಿಗೆ ನೀಡಿರುವ ಅನುಮೋದನೆಯಿಂದ ₹565 ಕೋಟಿ ಹೂಡಿಕೆಯಾಗಲಿದ್ದು, 300 ಜನರಿಗೆ ಉದ್ಯೋಗಾವಕಾಶ ಸಿಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾಗಿರುವ ಶ್ರೀಮತಿ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಹಾಗೂ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Advertisement