

ಮಂಡ್ಯ: ಜಿಲ್ಲೆಯ ವಿ.ಸಿ.ನಾಲೆ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆಗೆ ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದ್ದು, ಜಲಸಂಪನ್ಮೂಲ ಇಲಾಖೆಯಿಂದ ಕಾವೇರಿ ಶಾಖಾ ನಾಲೆಗಾಗಿ ಈ ಹಣ ಬಿಡುಗಡೆಯಾಗಲಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರ ಬೆಳಗಳಿಗೆ ಅನುಕೂಲವಾಗಲೆಂದು ಹಣ ಬಿಡಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇದಕ್ಕೆ ಸಹಕಾರ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಧನ್ಯವಾದ ಸಲ್ಲಿಸಿ, ಶೀಘ್ರ ಟೆಂಡರ್ ಕರೆದು ನಾಲಾ ಅಭಿವೃದ್ಧಿ ಮಾಡುವುದಾಗಿ ಸ್ಪಷ್ಟಪಡಿಸಿದರು.
ಕಳೆದ ಎರಡೂವರೆ ವರ್ಷದಲ್ಲಿ ನೂರು ಕೋಟಿ ಹಣವನ್ನು ನಾಲಾ ಅಭಿವೃದ್ಧಿ ಕಾಮಗಾರಿಗೆ ವ್ಯಯಮಾಡಲಾಗಿದೆ. ಇನ್ನು ನೂರು ಕೋಟಿ ಹಣವು ನಾಲಾ ಅಭಿವೃದ್ಧಿಗಾಗಿ ಹಂತ ಹಂತವಾಗಿ ಬಿಡುಗಡೆಯಾಗಲಿದ್ದು, ಇದಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಜೊತೆಗೆ ಬಸರಾಳು ಭಾಗದ ಹೇಮಾವತಿ ನಾಲೆ ಅಭಿವೃದ್ಧಿಗೆ ಡಿಪಿಆರ್ ಆಗಿದೆ. 350 ಕೋಟಿ ವೆಚ್ಚದಲ್ಲಿ ಬಸರಾಳು ಭಾಗದ ನಾಲಾ ಅಭಿವೃದ್ಧಿ ಕಾಮಗಾರಿ ಆಗಲಿದೆ ಎಂದು ಹೇಳಿದರು.
ಮಂಡ್ಯ ನಗರಕ್ಕೆ ಹೊಸರೂಪ ಕೊಡಲು ಮುಂದಾಗಿದ್ದು, ಡೆಲ್ಟಾ ಮೂಲಕ ಮಹಾನಗರ ಪಾಲಿಕೆ ಮಾದರಿಯಲ್ಲಿ ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಗೌರಿಶಂಕರ ಕಲ್ಯಾಣ ಮಂಪಟದವರೆಗೆ ಉತ್ತಮ ರೀತಿಯ ರಸ್ತೆ, ಫುಟ್ಪಾತ್ ಸೈಕಲ್ ಹಬ್ ನಿರ್ಮಿಸಲಾಗುವುದು. ಜೊತೆಗೆ ಬನ್ನೂರು ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ಹೊಸಹಳ್ಳಿ ವೃತ್ತದ ಅಭಿವೃದ್ಧಿಗೆ 1.5 ಕೋಟಿ ಬಿಡುಗಡೆಯಾಗಿದೆ. ನಗರಸಭೆ ಮೂಲಕ ಹಣ ಬಿಡುಗಡೆಯಾಗಿ ವಿದೇಶಿ ಮಾದರಿಯಲ್ಲಿ ವೃತ್ತವನ್ನು ಅಭಿವೃದ್ಧಿ ಪಡಿಸಲಾಗುವುದು. ವಿ.ವಿ.ರಸ್ತೆಗೆ 4 ಕೋಟಿ ರೂ. ವೆಚ್ಚದಲ್ಲಿ ನಗರಸಭೆ ಮತ್ತು ಡೆಲ್ಟಾ ಮೂಲಕ ಸಂಪೂರ್ಣ ಅಭಿವೃದ್ಧಿ ಪಡಿಸಿ, ವಾಹನ ನಿಲ್ದಾಣ ಮುಕ್ತ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.
ಮೈಷುಗರ್ ಹೊಸ ಕಾರ್ಖಾನೆ ನಿರ್ಮಿಸುವ ಬದಲು ಹೀಗಿರುವ ಕಾರ್ಖಾನೆಗೆ ಹೊಸ ಬಾಯ್ಲರ್ ಅಳವಡಿಸಲಾಗುವುದು. ಇದಕ್ಕೆ 60 ಕೋಟಿ ರೂ. ಖರ್ಚಾಗಲಿದ್ದು, ಟೆಂಡರ್ ಸಹ ಕರೆಯಲಾಗಿದೆ. ಇದಿಷ್ಟೇ ಅಲ್ಲದೇ 33 ಕೋಟಿ ರೂ. ವೆಚ್ಚದಲ್ಲಿ ಮಂಡ್ಯಕ್ಕೆ ಕಾರ್ಮಿಕ ವಸತಿ ಶಾಲೆಯನ್ನು ಬಜೆಟ್ನಲ್ಲಿ ಮಂಜೂರು ಮಾಡಿಸಲಾಗಿದೆ ಎಂದರು.
35 ಕೋಟಿ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವತಿಯಿಂದ ಅಬ್ದುಲ್ ಕಲಾಂ ಆಜಾದ್ ಯೋಜನೆಯಡಿ ಬಿ.ಹೊಸೂರು ಗ್ರಾಮದಲ್ಲಿ ಎರಡೂವರೆ ಎಕರೆ ಜಾಗ ಮಂಜೂರಾಗಿದ್ದು, ಅಲ್ಲಿ ಅಲ್ಪಸಂಖ್ಯಾತ ಮಕ್ಕಳಿಗಾಗಿ ಹಾಸ್ಟೆಲ್ ನಿರ್ಮಿಸಲಾಗುವುದು. ಜೊತೆಗೆ ಇನ್ನು 2.5 ಎಕರೆ ಜಾಗ ಬೇಕಾಗಿದ್ದು, ಶೀಘ್ರದಲ್ಲೇ ಜಿಲ್ಲಾಧಿಕಾರಿಗಳು ಉಳಿದ ಜಾಗವನ್ನು ಮಂಜೂರು ಮಾಡಿಕೊಡಲಿದ್ದಾರೆ. ಒಟ್ಟಾರೆಯಾಗಿ ಬಿ.ಹೊಸೂರು ಗ್ರಾಮವನ್ನು ಶಿಕ್ಷಣ ಮತ್ತು ಆರೋಗ್ಯ ಹಬ್ ಮಾಡುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
Advertisement