

ಯಾದಗಿರಿ: ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ಮಹಿಳೆಯೊಬ್ಬರು ಮಾಂಗಲ್ಯ ಸರ ತೆಗೆದಿಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ವಡಗೇರ ತಾಲೂಕಿನ ಜೋಳದಡಗಿ ಬ್ರಿಡ್ಜ್–ಕಂ–ಬ್ಯಾರೇಜ್ ಬಳಿ ನಡೆದಿದೆ.
ಯಾದಗಿರಿ ನಗರದ ಹೊರವಲಯದ ಗಿರಿನಗರ ನಿವಾಸಿ ಕಮಲಮ್ಮ (42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ . ಕಮಲಮ್ಮ ಸಿಳ್ಳೆ ಕ್ಯಾತ ಸಮುದಾಯಕ್ಕೆ ಸೇರಿದವರು. ಈಕೆಯ ಪುತ್ರ ಎರ್ರಿಸ್ವಾಮಿ ವಿರುದ್ಧ ಅನೈತಿಕ ಸಂಬಂಧದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ತಮ್ಮದೇ ಸಮುದಾಯದ ಮುಖಂಡರು ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ವಿಧಿಸಿದ್ದಾರೆ ಎನ್ನಲಾಗಿದೆ.
ಮೀನುಗಾರಿಕೆ ನಡೆಸುವುದು ಹಾಗೂ ಮೀನು ಮಾರಾಟ ಮಾಡಲು ಕೂಡ ಅವಕಾಶ ನೀಡದೆ ಮುಖಂಡರು ನಿರ್ಬಂಧ ಹೇರಿದ್ದರು. ಇದರಿಂದ ಮನನೊಂದು ಕಮಲಮ್ಮ ಮಗಳ ಊರಾದ ಜೋಳದಡಗಿ ಗ್ರಾಮಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಮುನ್ನ ಬ್ಯಾರೇಜ್ ಮೇಲೆಯೇ ತಮ್ಮ ಮಾಂಗಲ್ಯ ಸರ ತೆಗೆದಿಟ್ಟಿರುವುದು ಗಮನಕ್ಕೆ ಬಂದಿದೆ. ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಈ ಸಂಬಂಘ ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement