

ಧಾರವಾಡ: ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮಾಚಾಪುರದಲ್ಲಿ ಭಾರೀ ಆಲಿಕಲ್ಲು ಮಳೆಯಾಗಿದ್ದು, ಇದರಿಂದ ರಸ್ತೆಗಳು ಹಾಗೂ ಮನೆಗಳ ಮೇಲೆ ಆಲಿಕಲ್ಲುಗಳು ರಾಶಿ ರಾಶಿಯಾಗಿ ಬಿದ್ದು, ಕ್ಷಣಾರ್ಧದಲ್ಲಿ ‘ಕಾಶ್ಮೀರ’ದಂತಾಗಿ ಬದಲಾದ ಅಪರೂಪದ ಘಟನೆ ಮಂಗಳವಾರ ಕಂಡು ಬಂದಿತು.
ಭಾರೀ ಮಳೆ ಹಾಗೂ ಆಲಿಕಲ್ಲು ಮಳೆ ಸುರಿದ ಪರಿಣಾಮ, ಗ್ರಾಮವೆಲ್ಲ ಬಿಳಿ ಹೊದಿಕೆಯಿಂದ ಆವೃತವಾಗಿ ಹಿಮಪ್ರದೇಶದಂತೆ ಕಾಣಿಸಿತು. ಮಳೆ ನಿಂತ ಕೂಡಲೇ ಜನರು ಮನೆಗಳಿಂದ ಹೊರಬಂದು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದರು.
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಡಾ. ಸಿ.ಎಸ್. ಪಾಟೀಲ್ ಅವರು ಮಾತನಾಡಿ, “ಸ್ಥಳೀಯ ಮಟ್ಟದಲ್ಲಿ ಉಂಟಾದ ತೀವ್ರ ಗಾಳಿಚಲನೆ, ಉಷ್ಣತೆ ಹಾಗೂ ತೇವಾಂಶದ ಸಂಯೋಜನೆಯಿಂದ ಈ ರೀತಿಯ ಆಲಿಕಲ್ಲು ಮಳೆ ಸಂಭವಿಸಿದೆ. ಮಾನ್ಸೂನ್ ಪೂರ್ವ ಮಳೆಯ ಅವಧಿಯಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದು ಹೇಳಿದ್ದಾರೆ.
ಕರ್ನಾಟಕದ ಉತ್ತರ ಒಳನಾಡಿನಲ್ಲಿ ಗಾಳಿಯ ವ್ಯತ್ಯಾಸ ಮತ್ತು ಉತ್ತರ ದಕ್ಷಿಣ ದಿಕ್ಕಿನಲ್ಲಿನ ವಾಯುಭಾರ ಕುಸಿತವು ಅತಿಯಾದ ಆಲಿಕಲ್ಲು ಮಳೆಗೆ ಕಾರಣವಾಗಿದೆ. ಇದರೊಂದಿಗೆ, ಅತಿಯಾದ ಬಿಸಿಲು ಕೂಡ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, “ಎರಡು ಗಂಟೆಗಳಿಗೂ ಹೆಚ್ಚು ಕಾಲ ಮಳೆ ಸುರಿಯಿತು. ಆ ಸಮಯದಲ್ಲೇ ನಿರಂತರವಾಗಿ ಆಲಿಕಲ್ಲುಗಳು ಬೀಳುತ್ತಲೇ ಇದ್ದವು. ರಸ್ತೆಗಳೆಲ್ಲ ಹಿಮಪಾತದಂತೆ ಕಂಗೊಳಿಸಿತು. ಇಂತಹ ದೃಶ್ಯವನ್ನು ನಾವು ಎಂದಿಗೂ ನೋಡಿರಲಿಲ್ಲ ಎಂದು ಹೇಳಿದ್ದಾರೆ.
ಆದರೆ, ಪ್ರಕೃತಿಯ ಈ ವಿಸ್ಮಯ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಕೊಯ್ಲು ಮಾಡು ಸಿದ್ಧವಾಗಿದ್ದ ಟೊಮೊಟೋ ಬೆಳೆ ಸಂಪೂರ್ಣವಾಗಿ ನಾಶಗೊಂಡಿದೆ. ಇದಲ್ಲದೆ ತೋಟಗಾರಿಕೆ ಬೆಳೆಗಳು ಮತ್ತು ಸಸಿಗಳು ಕೂಡ ಹಾನಿಯಾಗಿದ್ದು, ಭಾರೀ ಮಳೆ ರೈತರಿಗೆ ಹೊಡೆತ ನೀಡಿದಂತಾಗಿದೆ.
ಇನ್ನೂ ಮಳೆಯಿಂದಾಗಿ ಕೆಲ ಮನೆಗಳ ಮೇಲ್ಚಾವಣಿಗಳಿಗೂ ಹಾನಿ ಉಂಟಾಗಿದ್ದು, ರೈತರು ಸ್ಥಳೀಯ ಕೃಷಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹಾನಿ ಕುರಿತ ವಿಡಿಯೋ ಮತ್ತು ಫೋಟೋಗಳನ್ನು ಅಧಿಕಾರಿಗಳಿಗೆ ಹಂಚಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
Advertisement