

ಬೆಂಗಳೂರು: ರಾಜ್ಯಾದ್ಯಂತ ಪುರಸಭೆಗಳು ಹೋರ್ಡಿಂಗ್ಗಳು, ಜಾಹೀರಾತು ಫಲಕಗಳ ಶುಲ್ಕದ ಮೇಲೆ ತೆರಿಗೆ ವಿಧಿಸಲು ಅನುವು ಮಾಡಿಕೊಡುವ ತಿದ್ದುಪಡಿ ಮಸೂದೆ ಮತ್ತು ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಎರಡು ತಿದ್ದುಪಡಿ ಮಸೂದೆಗಳನ್ನು ವಿಧಾನ ಪರಿಷತ್ತು ಬುಧವಾರ ಅಂಗೀಕರಿಸಿದೆ.
ಈ ಎರಡೂ ಮಸೂದೆಗಳನ್ನು ಮಾರ್ಚ್ 16 ರಂದು ಕರ್ನಾಟಕ ವಿಧಾನಸಭೆ ಅಂಗೀಕರಿಸಲಾಗಿತ್ತು.
ಮುನ್ಸಿಪಾಲಿಟಿಗಳು ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ-2026 ಅನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ್ದರು.
ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಮಸೂದೆ ಬಗ್ಗೆ ವ್ಯಾಪಕವಾಗಿ ಚರ್ಚಿಸಿದ ನಂತರ ಇಂದು ಅದನ್ನು ಅಂಗೀಕರಿಸಲಾಯಿತು.
ಈ ಮೂಸದೆ ಪ್ರಕಾರ ಯಾವುದೇ ಭೂಮಿಯ ಕಟ್ಟಡದ, ಗೋಡೆಯ ಮೇಲೆ ಅಥವಾ ಮೇಲ್ಭಾಗದಲ್ಲಿ ಯಾವುದೇ ಜಾಹೀರಾತನ್ನು ಪ್ರದರ್ಶಿಸುವ, ಅಳವಡಿಸುವ ಅಥವಾ ಉಳಿಸಿಕೊಂಡಿರುವ ಅಥವಾ ಯಾವುದೇ ರೀತಿಯಲ್ಲಾಗಲಿ ಯಾವುದೇ ಸಾರ್ವಜನಿಕ ಇಲ್ಲವೇ ಖಾಸಗಿ ಸ್ಥಳದಲ್ಲಾಗಲಿ ಸಾರ್ವಜನಿಕರ ದೃಷ್ಟಿಗೆ ಬೀಳುವಂತೆ ಯಾವುದೇ ಜಾಹೀರಾತನ್ನು ಪ್ರದರ್ಶಿಸುವ ಪ್ರತಿಯೊಬ್ಬ ವ್ಯಕ್ತಿಯು, ಹಾಗೆ ಪ್ರದರ್ಶಿಸಿರುವ ಪ್ರತಿಯೊಂದು ಜಾಹಿರಾತಿನ ಮೇಲೆ, ಪೌರ ಪಾಲಿಕೆ(municipal council) ನಿರ್ಣಯದ ಮೂಲಕ ನಿರ್ಧರಿಸಿದ ದರಗಳಲ್ಲಿ ಮತ್ತು ಅಂಥ ವಿಧಾನದಲ್ಲಿ ಹಾಗೂ ಅಂಥ ವಿನಾಯಿತಿಗಳಿಗೊಳಪಟ್ಟು ತೆರಿಗೆಯನ್ನು ಪಾವತಿ ಮಾಡಬೇಕು.
ಪೊಲೀಸ್ ವರ್ಗಾವಣೆಗೆ ಸಂಬಂಧಿಸಿದ ಮಸೂದೆ ಅಂಗೀಕಾರ
ಇನ್ನು ಗೃಹ ಸಚಿವ ಜಿ. ಪರಮೇಶ್ವರ ಅವರು ಮಂಡಿಸಿದ ಕರ್ನಾಟಕ ಪೊಲೀಸ್(ತಿದ್ದುಪಡಿ) ಮಸೂದೆ 2026 ಅನ್ನು ಇಂದು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು.
ಈ ಮಸೂದೆ ಪೊಲೀಸ್ ಅಧಿಕಾರಿಗಳನ್ನು, ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿವೈಎಸ್ಪಿ) ದರ್ಜೆಯವರೆಗೆ ದುಷ್ಕೃತ್ಯ, ನಿರ್ಲಕ್ಷ್ಯ ಅಥವಾ ಕರ್ತವ್ಯ ಲೋಪಕ್ಕಾಗಿ ತಕ್ಷಣ ವರ್ಗಾಯಿಸಲು ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಮಂಡಳಿಗೆ(ಪಿಇಬಿ) ಅಧಿಕಾರ ನೀಡುತ್ತದೆ.
ಈ ತಿದ್ದುಪಡಿಯು ಕಡ್ಡಾಯ ಎರಡು ವರ್ಷಗಳ ಅಧಿಕಾರಾವಧಿ ಮುಗಿಯುವ ಮೊದಲು ವರ್ಗಾವಣೆ ಮಾಡಲು ಅವಕಾಶ ನೀಡುತ್ತದೆ.
Advertisement