

ಬೆಂಗಳೂರು: ಪಾದಚಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನಗರದ ಫುಟ್ಪಾತ್ ಮತ್ತು ಪಾರ್ಕಿಂಗ್ ನೀತಿಗೆ ಸಂಬಂಧಿಸಿದಂತೆ ಬೆಂಗಳೂರಿನ ಶಾಸಕರೊಂದಿಗೆ ಚರ್ಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ.
ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚು ಕಾಲ ಹಳೇ ವಾಹನಗಳನ್ನು ನಿಲ್ಲಿಸಿದರೂ ಟೋಯಿಂಗ್ ಮಾಡಲಾಗುವುದು. ನಗರದ ರಸ್ತೆಗಳಲ್ಲಿ ಎಲ್ಲೆಲ್ಲಿ ಹಳೇ ವಾಹನಗಳನ್ನು ನಿಲ್ಲಿಸಿದ್ದಾರೋ ಅದನ್ನು ತುಂಬಿಕೊಂಡು ಹೋಗಿ ನಿರ್ದಿಷ್ಟ ಜಾಗದಲ್ಲಿ ಡಂಪ್ ಮಾಡುತ್ತೇವೆ. ನಗರದ ಸೌಂದರ್ಯವನ್ನು ಹಾಳು ಮಾಡುವ ಅಕ್ರಮ ಫ್ಲೆಕ್ಸ್ಗಳನ್ನು ಅಳವಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಮತ್ತು ಬೀದಿ ಬದಿ ವ್ಯಾಪಾರಿಗಳು ಫುಟ್ಪಾತ್ಗಳನ್ನು ಆಕ್ರಮಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಧಾನಸೌಧದಲ್ಲಿಂದು ಜಿಬಿಎ 5 ನಗರ ಪಾಲಿಕೆಗಳ 2026-27ನೇ ಸಾಲಿನ ಆಯವ್ಯಯದ ಸಿದ್ಧತೆಯ ಕುರಿತು ಅಧಿಕಾರಿಗಳು ಹಾಗೂ ಬೆಂಗಳೂರಿನ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಸಾಕಷ್ಟು ಹಣ ವ್ಯಯಿಸಿ ನಿರ್ಮಿಸಿರುವ ಫುಟ್ಪಾತ್ಗಳನ್ನು ಬೀದಿ ಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿರುವ ಬಗ್ಗೆ ಪಾದಚಾರಿಗಳಿಂದ ಹಲವಾರು ದೂರುಗಳು ಬಂದಿರುವುದರಿಂದ ಫುಟ್ಪಾತ್ ನೀತಿ ತರಲು ನಿರ್ಧರಿಸಲಾಗಿದೆ ಎಂದರು.
ಪಾದಚಾರಿಗಳಿಗೆ ಫುಟ್ಪಾತ್ಗಳನ್ನು ತೆರವುಗೊಳಿಸಲು ಮಾರಾಟಗಾರರಿಗೆ ಗೊತ್ತುಪಡಿಸಿದ ಸ್ಥಳಗಳನ್ನು ಗೊತ್ತುಪಡಿಸಲಾಗುವುದು. ಮಾರಾಟಗಾರರು ತಮ್ಮ ವ್ಯಾಪಾರವನ್ನು ಗೊತ್ತುಪಡಿಸಿದ ಸ್ಥಳಗಳಲ್ಲಿ ಮಾತ್ರ ಮಾಡಬೇಕು; ಅವರು ಬೇರೆ ಸ್ಥಳಗಳಿಗ ಹೋದರೆ ಅಲ್ಲಿಂದ ಹೊರಹಾಕುತ್ತೇವೆ. ನೋಂದಾಯಿಸಿದ ಮಾರಾಟಗಾರರು ಕೆಲವು ರಸ್ತೆಗಳಲ್ಲಿ ಮಾತ್ರ ತಮ್ಮ ವ್ಯಾಪಾರವನ್ನು ಮಾಡಬಹುದು.ಇದಕ್ಕೆ ಎಲ್ಲ ಶಾಸಕರು ಸಹಮತ ವ್ಯಕ್ತಪಡಿಸಿದ್ದಾರೆ. ನನಗೆ ಜವಾಬ್ದಾರಿ ನೀಡಿದ್ದಾರೆ ಎಂದು ತಿಳಿಸಿದರು.
ರಾತ್ರಿ ವೇಳೆ ರಸ್ತೆಬದಿ ಅಥವಾ ಫುಟ್ಪಾತ್ಗಳಲ್ಲಿ ಪ್ಯಾಕ್ ಮಾಡಿ ಬಿಟ್ಟ ಸರಕುಗಳನ್ನು ಕಾರ್ಪೊರೇಷನ್ಗಳು ವಶಪಡಿಸಿಕೊಳ್ಳುತ್ತವೆ. ನಗರದಲ್ಲಿ 60,000 ಮಾರಾಟಗಾರರು ನೋಂದಣಿ ಮಾಡಿಕೊಂಡಿದ್ದರೆ, 30,000 ಜನರು ತಳ್ಳೋ ಗಾಡಿ ಬೇಕು ಎಂದು ಕೇಳಿದ್ದಾರೆ. ಟೆಂಡರ್ ಕರೆದಿದ್ದೇವೆ. ಎಲ್ಲಿ ಬೇಕು ಅಷ್ಟೇ ವ್ಯಾಪಾರ ಮಾಡಬೇಕು. ಐಡೆಂಟಿಟಿ ಕಾರ್ಡ್ ಇದರೆ ಅಷ್ಟೇ ಮಾರಾಟ ಮಾಡಬೇಕು. ಇನ್ನು ಪಾರ್ಕ್ನಲ್ಲಿ ಅನಧಿಕೃತ ಕೆಲಸ ನಡೆಯುತ್ತಿವೆ ಅಂತ ಆರೋಪವಿದೆ ಹೀಗಾಗಿ ಪಾರ್ಕ್ ಟೈಮ್ ನಿಗದಿ ಮಾಡುತ್ತೇವೆ. ಈ ಬಗ್ಗೆ ಐದು ಪಾಲಿಕೆಯ ಲೋಕಲ್ ಎಂಎಲ್ಎಗಳು ನಿರ್ಧಾರ ಮಾಡಲಿ ಎಂದು ಹೇಳಿದ್ದಾರೆ ಎಂದರು.
ಪದೇ ಪದೇ ನಿರ್ದೇಶನದ ಹೊರತಾಗಿಯೂ ಎಲ್ಲಾ ಪಾರ್ಟಿಯವರು ಫ್ಲೆಕ್ಸ್ ಹಾಕುತ್ತಾರೆ. ಯಾರು ಫ್ಲೆಕ್ಸ್ ಹಾಕ್ತಾರೆ ಅವರಿಗೆ 50 ಸಾವಿರದಿಂದ 1 ಲಕ್ಷ ರೂ ದಂಡ ಹಾಕಲಾಗುವುದು. ಈ ಬಗ್ಗೆ ಪೊಲೀಸರಿಗೂ, ಕಾರ್ಪೊರೇಷನ್ನವರಿಗೆ ತಿಳಿಸಿದ್ದೇನೆ, ಕೇಸ್ ಹಾಕುತ್ತೇವೆ ಎಂದಿದ್ದಾರೆ.
ಜಿಬಿಎ ಬಜೆಟ್ ಸಭೆ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ಇಂದು ಬೆಂಗಳೂರು ನಗರದ ಶಾಸಕರ ಜೊತೆ ಬಜೆಟ್ ಸಭೆ ಆಗಿದೆ. ಪ್ರಮುಖ ನಿರ್ಣಯ ಆಗಿದೆ. ಅಶೋಕ್ ಕೂಡ ಬಂದಿದ್ದರು. ಅಭಿಪ್ರಾಯ ತಿಳಿಸಿದ್ದಾರೆ. ವಾರ್ಡ್ ವೈಸ್ ಬಜೆಟ್ ನೀಡಬೇಕು ಎಂದು ಒತ್ತಿಯಿಸಿದ್ದಾರೆ ಎಂದರು. ಇನ್ನು ಶಾಸಕರಿಂದ ವಾರ್ಡಿಗೆ 5-10 ಕೋಟಿ ರೂ ಅನುದಾನ ಬೇಡಿಕೆ ವಿಚಾರವಾಗಿ ಮಾತನಾಡಿದ್ದು, ನೋಡೋಣ ಎಷ್ಟಾಗಲಿದೆ. ಅವರು ಆಕಾಶನೂ ಕೇಳ್ತಾರೆ, ಭೂಮಿನೂ ತಂದು ಕೊಡಿ ಅಂತ ಕೇಳುತ್ತಾರೆ. ನಮ್ಮಿಂದ ಎಷ್ಟಾಗಲಿದೆ ಅನ್ನೋದು ನೋಡಿ ಕೊಡುತ್ತೇವೆ ಎಂದರು.
Advertisement