

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ವೇಳೆ ಬಡವರಿಂದ ಹಣ ಪಡೆದುಕೊಳ್ಳುತ್ತಿರುವ ಆರೋಪ ಬಂದ ಹಿನ್ನಲೆಯಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ. ದೇಶಪಾಂಡೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶ ನೀಡಿದ ಪ್ರಸಂಗ ನಡೆಯಿತು.
ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಸಿಜೇರಿಯನ್ ಸಮಯದಲ್ಲಿ ಬಡವರಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಆಸ್ಪತ್ರೆಯ ವೈದ್ಯರಾದ ಡಾ. ಅಖಿಲ ಕಿತ್ತೂರ ಮತ್ತು ಡಾ. ಕೀರ್ತಿ ವಿರುದ್ಧ ಸಾರ್ವಜನಿಕರಿಂದ ದೂರುಗಳು ಕೂಡ ಬಂದಿದ್ದವು. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದ ತಾಲೂಕು ಆರೋಗ್ಯ ರಕ್ಷ ಸಮಿತಿ ಸಭೆಯಲ್ಲಿ ವೈದ್ಯರಾದ ಡಾ.ಅಖಿಲ್ ಕಿತ್ತೂರು ಮತ್ತು ಡಾ.ಕೀರ್ತಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಮದುವೆಯಾಗಿ ಮಕ್ಕಳಾಗಿರುವ ನಿಮಗೆ ಈ ರೀತಿ ಬಡವರಿಂದ ರಕ್ತ ಹೀರಲು ಮನಸ್ಸಾದರೂ ಹೇಗೆ ಬರುತ್ತಿದೆ, ನಿಮಗೆ ಎಷ್ಟು ಜನ ಮಕ್ಕಳಿದ್ದಾರೆ, ಮಾನವೀಯತೆ ಇಲ್ಲವೇ ಎಂದು ಸಿಟ್ಟಿನಿಂದಲೇ ಪ್ರಶ್ನಿಸಿದರು.
ಹೆರಿಗೆ ಮಾಡಿಸಿ ಎಷ್ಟು ಹಣ ಪಡೆಯುತ್ತೀರಿ ಎಂದು ವೈದ್ಯರನ್ನು ನೇರವಾಗಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯರು, ನಾವು ಯಾರಿಂದಲೂ ಕೇಳಿ ಪಡೆಯುತ್ತಿಲ್ಲ, ಅವರು ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತೇವೆ ಎಂದರು. ವೈದ್ಯರ ಈ ಹೇಳಿಕೆಗೆ ಸಿಟ್ಟಾದ ದೇಶಪಾಂಡೆ, ನಿಮ್ಮ ಮಾತಿನ ಅರ್ಥವೇನು? ಕೇಳಿ ಪಡೆಯುವುದಿಲ್ಲ ಆದರೆ ಕೊಟ್ಟಷ್ಟು ತಗೋತ್ತೀರಿ ಎಂದರೆ ಅದು ಸರಿಯೇ ಎಂದು ಪ್ರಶ್ನಿಸಿದರು.
ತಹಶಿಲ್ದಾರರಿಗೆ ನಿರ್ದೇಶನ, ಕಠಿಣ ಕ್ರಮದ ಎಚ್ಚರಿಕೆ
ಮಾನ ಮರ್ಯಾದೆ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡ ಅವರು,ಮುಂದೆ ಯಾರಿಂದಾದರೂ ಹಣ ಪಡೆದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು. ಇಲ್ಲಿಯವರೆಗೆ ಹಣ ಪಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ನಾನೇನು ಮಂತ್ರಿ ಸ್ಥಾನಕ್ಕೆ ಅಪೇಕ್ಷೆ ಇಟ್ಟಿಲ್ಲ
ಮಂತ್ರಿ ಸ್ಥಾನದ ವಿಚಾರವಾಗಿ ಮಾತನಾಡಿದ ಅವರು, ಹೊಸ ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲರಿಗೂ ಮಂತ್ರಿ ಆಗಬೇಕೆಂಬ ಆಸೆ ಇರುವುದು ಸಹಜ. ಮಂತ್ರಿ ಆಗಬೇಕಂತ ನನಗೆ ಅತಿ ಆಸೆ ಇಲ್ಲ. ಅವರಿಗೆ ಬೇಕಾದರೆ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿ. 9 ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಏಳೆಂಟು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಮಂತ್ರಿ ಮಾಡಿ ಅಂತ ನಾನ್ಯಾರಿಗೂ ಕೇಳಲ್ಲ ಎಂದಿದ್ದಾರೆ.
Advertisement