

ಬೆಂಗಳೂರು: ಭದ್ರಾ ಮೇಲ್ದಂಡೆ ಸೇರಿದಂತೆ ರಾಜ್ಯದ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗದಿರುವುದರಿಂದ ರಾಜ್ಯದ ಆರ್ಥಿಕ ಸ್ಥಿತಿಗೆ ಗಂಭೀರ ಹೊಡೆತ ಬಿದ್ದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಆರೋಪಿಸಿದರು.
ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು, ಕೇಂದ್ರದ ನಿರ್ಲಕ್ಷ್ಯ ಹಾಗೂ ರಾಜ್ಯದ ಪಾಲಿನ ಹಣ ಬಿಡುಗಡೆ ಮಾಡದಿರುವುದೇ ಆದಾಯ ಕೊರತೆಗೆ ಪ್ರಮುಖ ಕಾರಣ ಎಂದು ಹೇಳಿದರು.
ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ಅನುದಾನ ಘೋಷಿಸಿದ್ದರು. ಜೊತೆಗೆ, ಬೆಂಗಳೂರು ಕೆರೆಗಳ ಅಭಿವೃದ್ಧಿಗೆ ರೂ.3,000 ಕೋಟಿ, ಪೆರಿಫೆರಲ್ ರಿಂಗ್ ರೋಡ್ (PRR) ಯೋಜನೆಗೆ ರೂ.3,000 ಕೋಟಿ ಹಾಗೂ ವಿಶೇಷ ಅನುದಾನವಾಗಿ ರೂ.5,695 ಕೋಟಿ ಮೀಸಲಿಡಲಾಗಿತ್ತು. ಈ ಎಲ್ಲವನ್ನು ಸೇರಿಸಿ ರಾಜ್ಯಕ್ಕೆ ರೂ.11,495 ಕೋಟಿ ಸಿಗಬೇಕಾಗಿದ್ದರೂ, ಇದುವರೆಗೆ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ಅನುದಾನ ಘೋಷಣೆಯನ್ನು ಸ್ವಾಗತಿಸಿ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ್ದರು. ಆದರೆ, ಆ ಬಳಿಕ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂಬುದನ್ನು ಸಿಎಂ ನೆನಪಿಸಿದರು.
“ನಾನು ನಾಲ್ಕು ಬಾರಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯದ ಪಾಲಿನ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದೇನೆ. ಪ್ರತೀ ಬಾರಿಯೂ ಭರವಸೆ ನೀಡಲಾಗಿದೆ, ಆದರೆ ಕಾರ್ಯರೂಪಕ್ಕೆ ಬಂದಿಲ್ಲ, ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಹಣವನ್ನು ನೀಡಿದ್ದರೆ ಈ ಮಟ್ಟದ ಆದಾಯ ಕೊರತೆ ಎದುರಾಗುತ್ತಿರಲಿಲ್ಲ ಎಂದು ತಿಳಿಸಿದರು.
ಇದೇ ವೇಳೆ, ರಾಜ್ಯದ ಆದಾಯ ಕೊರತೆ ಕುರಿತು ಪ್ರತಿಪಕ್ಷ ಮಾಡುತ್ತಿರುವ ಟೀಕೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, “ಪ್ರಸ್ತುತ ರಾಜ್ಯದ ಆದಾಯ ಕೊರತೆ ರೂ.22,597 ಕೋಟಿ ಇದ್ದು, ಇದು ಹಣಕಾಸು ಆಯೋಗದ ಮಿತಿಯೊಳಗೇ ಇದೆ. ಶೇಕಡಾ 2.8ರಷ್ಟಿರುವ ಈ ಕೊರತೆಗೆ ಕೇಂದ್ರದ ಅನುದಾನ ನೀಡದಿರುವುದೇ ಪ್ರಮುಖ ಕಾರಣ ಎಂದು ಸಮರ್ಥಿಸಿಕೊಂಡರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಪ್ರತಿಕ್ರಿಯಿಸಿದ ಸಿಎಂ, ಎಲ್ಲಾ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಪ್ರತಿನಿಧಿ ಮಂಡಳಿಯನ್ನು ದೆಹಲಿಗೆ ಕರೆದೊಯ್ಯಲು ಮುಂದಾಗಬೇಕು ಹಾಗೂ ರಾಜ್ಯದ ಹಕ್ಕಿನ ಅನುದಾನ ಪಡೆಯಲು ಒತ್ತಾಯಿಸಬೇಕು ಎಂದು ಸಲಹೆ ನೀಡಿದರು.
Advertisement