

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 28 ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ನೋಡಲು ತಮ್ಮ ಕುಟುಂಬಕ್ಕೆ ತಲಾ ಐದು ಟಿಕೆಟ್ ನೀಡಬೇಕು ಎಂದು ಆಡಳಿತ ಮತ್ತು ಪ್ರತಿಪಕ್ಷ ಶಾಸಕರು ವಿಧಾನಸಭೆಯಲ್ಲೇ ಆಗ್ರಹಿಸಿದ್ದಾರೆ.
ಈ ವಿಚಾರ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅತ್ತ ಡಿಸಿಎಂ ಡಿಕೆ ಶಿವಕುಮಾರ್ ಶಾಸಕರಿಗೆ ಟಿಕೆಟ್ ಕೇಳೋ ಹಕ್ಕಿದೆ ಎಂದು ಹೇಳಿದ್ದು, ಇತ್ತ ಗೃಹ ಸಚಿವ ಪರಮೇಶ್ವರ ಸಹ ಸಮರ್ಥನೆ ಮಾಡಿಕೊಂಡಿದ್ದಾರೆ.
ಐಪಿಎಲ್ ಟಿಕೆಟ್ ಗೆ ಶಾಸಕರ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ‘ಶಾಸಕರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಸರ್ಕಾರ ಎಷ್ಟರ ಮಟ್ಟಿಗೆ ಭಾಗಿಯಾಗುತ್ತದೆ ಎಂಬುದನ್ನು ನೋಡಬೇಕು. ಈವರೆಗೆ ಸರ್ಕಾರ ಮಧ್ಯಪ್ರವೇಶ ಮಾಡಿಲ್ಲ. ದುರಂತದ ಹಿನ್ನೆಲೆಯಲ್ಲಿ ಕಮಿಟಿಗೆ ಶಿಫಾರಸು ಮಾಡಿ ಪಂದ್ಯ ಆಡಲು ಅನುಮತಿ ನೀಡಿದ್ದೇವೆ ಎಂದರು.
"ಟಿಕೆಟ್ ವಿಚಾರ ಈಗ ಸ್ಪೀಕರ್ ಕಚೇರಿ ಮತ್ತು ಕೆಎಸ್ಸಿಎ ಅಥವಾ ಆರ್ಸಿಬಿ ಸಂಸ್ಥೆಗೆ ಬಿಟ್ಟ ವಿಷಯ. ಸ್ಪೀಕರ್ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂಬುದು ಅವರಿಗೆ ಬಿಟ್ಟ ವಿಚಾರ. ಏಕೆಂದರೆ ಶಾಸಕರು ಸ್ಪೀಕರ್ ಅಡಿಯಲ್ಲಿ ಬರುತ್ತಾರೆ, ಆದ್ದರಿಂದ ಅವರು ನಿರ್ಧಾರ ತೆಗೆದುಕೊಳ್ಳಬೇಕು..." ಎಂದು ಹೇಳಿದ್ದಾರೆ.
Advertisement