

ಬೆಂಗಳೂರು: ಇರಾನ್-ಇಸ್ರೇಲ್, ಅಮೆರಿಕದ ಯುದ್ಧ ಪರಿಣಾಮದಿಂದಾಗಿ ಅಡುಗೆ ಅನಿಲ ಬಳಕೆಯ ಮೇಲೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದ್ದು, ಸಹಜವಾಗಿ ಹಾಲು ಹಾಗೂ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಮಾಡಬೇಕಾಗಬಹುದು ಎಂದು ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಸೂಚ್ಯವಾಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ತೈಲ ಸರಬರಾಜಿನಲ್ಲಿ ಸಮಸ್ಯೆಯಿಲ್ಲ. ಆದರೆ ಅಡುಗೆ ಅನಿಲವನ್ನು ಶೇ.55ರಷ್ಟು ಮಾತ್ರ ಬಳಕೆ ಮಾಡಬೇಕು ಎಂಬ ನಿರ್ದೇಶನವಿದೆ. ಶೇಕಡಾ ನೂರರಷ್ಟು ಅಡುಗೆ ಅನಿಲ ಬಳಕೆ ಮಾಡಬೇಕಾದರೆ ಶೇ.35ರಷ್ಟು ಹೆಚ್ಚುವರಿ ಶುಲ್ಕ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಈ ರೀತಿ ಹೆಚ್ಚುವರಿ ಆರ್ಥಿಕ ಹೊರೆಯಾದಾಗ ಅದರ ಹೊರೆ ಗ್ರಾಹಕರ ಮೇಲೆ ಬೀಳುತ್ತದೆ ಎಂದರು.
ಕೇಂದ್ರ ಸರ್ಕಾರ ಸೂಚ್ಯವಾಗಿ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಯ ನಿರ್ದೇಶನ ನೀಡಿದೆ. ಹೀಗಾಗಿ ಸಹಜವಾಗಿಯೇ ಹಾಲು ಒಕ್ಕೂಟಗಳು ತೊಂದರೆಗೆ ಸಿಲುಕುತ್ತಿವೆ. ಹಾಲು ಹಾಗೂ ನಂದಿನಿ ಉತ್ಪನ್ನಗಳಿಗೆ ಅಡುಗೆ ಅನಿಲ ಬಳಕೆಯ ಬಾಯ್ಲರ್ಗಳನ್ನು ಉಪಯೋಗಿಸುತ್ತಿದ್ದೇವೆ.
ಎಲೆಕ್ಟ್ರಿಕ್ ಹಾಗೂ ಸೋಲಾರ್ಶಕ್ತಿಯ ಬಾಯ್ಲರ್ಗಳನ್ನು ಬಳಸುತ್ತಿಲ್ಲ. ಒಂದು ವೇಳೆ ಪರ್ಯಾಯ ಬಾಯ್ಲರ್ಗಳನ್ನು ಉಪಯೋಗಿಸಬೇಕಾದರೆ ಬದಲಾವಣೆ ಮಾಡಿಕೊಳ್ಳಬೇಕು. ಅದಕ್ಕೆ ಟೆಂಡರ್ ಕರೆಯುವುದು ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ವಿಳಂಬವಾಗಲಿದೆ.
ಸೋಲಾರ್ ಬಳಸಲು ಸಾಧ್ಯವಿಲ್ಲ. ನಾವು ಬಾಯ್ಲರ್ ಗಳ ಮೂಲಕ ಹಬೆ ಸೃಷ್ಟಿಸುತ್ತೇವೆ. ನಮ್ಮಲ್ಲಿ ಯಾರೂ ಎಲೆಕ್ಟ್ರಿಕ್ ಬಾಯ್ಲರ್ ಬಳಸುತ್ತಿಲ್ಲ. ಫರ್ನೆಸ್ ಆಯಿಲ್, ಸೌದೆ ಒಲೆ ಅಥವಾ ಗ್ಯಾಸ್ ಬಳಸಲಾಗುತ್ತಿದೆ. ನಾನು ಅಧಿಕಾರಕ್ಕೆ ಬಂದ ಬಳಿಕ ಡೈರಿಯ ಒಂದು ಭಾಗದಲ್ಲಿ ಸೌದೆ ಒಲೆ ಬಳಸುವ ಅವಕಾಶವಿದ್ದು, ಬಾಯ್ಲರ್ ಗಳನ್ನು ಅದಕ್ಕೆ ಪರಿವರ್ತಿಸಬೇಕು. ಇದು ಒಂದೆರಡು ದಿನಗಳಲ್ಲಿ ಆಗುವ ಪ್ರಕ್ರಿಯೆ ಅಲ್ಲ.
ಈ ಮುನ್ನ ಫರ್ನೆಸ್ ಆಯಿಲ್, ಗ್ಯಾಸ್ ಬೆಲೆ ಕಡಿಮೆ ಇತ್ತು, ಈಗ ಬೆಲೆ ಹೆಚ್ಚಾಗಿರುವುದರಿಂದ ಸ್ಥಳೀಯವಾಗಿ ಸೌದೆ ಒಲೆಯನ್ನು ಒಂದು ಪ್ಲಾಂಟ್ ನಲ್ಲಿ ಅಳವಡಿಸಿಕೊಂಡಿದ್ದೇವೆ. ಉಳಿದ ಎರಡು ಮೂರು ಪ್ಲಾಂಟ್ ಗಳಲ್ಲಿ ಮಾಡಬೇಕು. ಬೆಂಗಳೂರಿನಲ್ಲಿ ಸೌದೆ ಒಲೆ ಬಳಸಲು ಆಗುವುದಿಲ್ಲ. ಮಾಲೀನ್ಯ ಸಮಸ್ಯೆ ಬರುತ್ತದೆ ಎಂದರು.
ನೀವು ಕೆಎಂಎಫ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಈ ಚುನಾವಣೆ ವಿಳಂಬವಾಗುತ್ತಿರುವ ಬಗ್ಗೆ ಕೇಳಿದಾಗ, “ನನಗೆ ಈ ಬಾಗ್ಗೆ ಮಾಹಿತಿ ಇಲ್ಲ. ನಾನು ಪ್ರಬಲ ಆಕಾಂಕ್ಷಿ ಎಂದು ಯಾವಾಗ ಹೇಳಿದ್ದೇನೆ? ನಾನು ಕೆಎಂಎಫ್ ಅಧ್ಯಕ್ಷನಾಗುತ್ತೇನೆ ಎಂದು ಹೇಳಿಲ್ಲವಲ್ಲ. ನನ್ನ ಪರವಾಗಿ ಬೇಡಿಕೆ ಇಡುತ್ತಿರುವವರು ನನಗೆ ಕಾಣಿಸುತ್ತಿಲ್ಲ” ಎಂದರು.
Advertisement