

ನವದೆಹಲಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ನಿರಾಕರಿಸಿದ್ದು, ವಿಚಾರಣಾ ನ್ಯಾಯಾಲಯವು ಒಂದು ವರ್ಷದೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಿ ಪ್ರಕರಣವನ್ನು ತೀರ್ಮಾನಿಸಬೇಕೆಂದು ಆದೇಶ ನೀಡಿದೆ.
ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ನೇತೃತ್ವದ ಇಬ್ಬರು ನ್ಯಾಯಮೂರ್ತಿಗಳ ಪೀಠ ಈ ಆದೇಶ ನೀಡಿದ್ದು, ಇಂದಿನಿಂದಲೇ ವಿಚಾರಣೆಯನ್ನು ಆದ್ಯತೆಯ ಮೇರೆಗೆ ನಡೆಸಬೇಕು ಎಂದು ಹೇಳಿದೆ.
ಜೈಲಿನಲ್ಲಿ ಇತರ ಕೈದಿಗಳಿಗೆ ನೀಡಲಾಗುವಂತೆ ದರ್ಶನ್ ಅವರಿಗೆ ಸಹ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಒಂದು ವರ್ಷದವರೆಗೆ ಅರ್ಜಿ ಸಲ್ಲಿಕೆ ಇಲ್ಲ
ಮುಂದಿನ ಒಂದು ವರ್ಷದವರೆಗೆ ದರ್ಶನ್ ಯಾವುದೇ ಜಾಮೀನು ಅರ್ಜಿ ಸಲ್ಲಿಸಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ. ಆದರೆ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ, ಆ ಬಳಿಕ ಅವರಿಗೆ ಜಾಮೀನು ಪರಿಗಣಿಸಬಹುದು ಎಂದು ಹೇಳಿದೆ.
ಹಿಂದಿನ ವಿಚಾರಣೆಗಳಲ್ಲಿ, ಜೈಲಿನಲ್ಲಿನ ಅಕ್ರಮಗಳು ಹಾಗೂ ಸಹ ಕೈದಿಗಳಿಂದ ಕಿರುಕುಳ ಮತ್ತು ಬೆದರಿಕೆ ಎದುರಿಸುತ್ತಿರುವುದಾಗಿ ದರ್ಶನ್ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದರು. ಇದಾದ ಬಳಿಕ ನ್ಯಾಯಾಲಯ ಜೈಲು ಅಧಿಕಾರಿಗಳಿಂದ ವರದಿ ಕೇಳಿತ್ತು.
ವಿಶೇಷ ಸರ್ಕಾರಿ ಅಭಿಯೋಜಕರು ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಿ, ದರ್ಶನ್ ಮಾಡಿದ್ದ ಎಲ್ಲ ಆರೋಪಗಳನ್ನು ವಿಡಿಯೋ ಸಾಕ್ಷ್ಯಗಳೊಂದಿಗೆ ತಳ್ಳಿಹಾಕಿದ್ದರು.
ವಿಚಾರಣೆ ವೇಳೆ, ಪ್ರಕರಣದಲ್ಲಿರುವ 270 ಸಾಕ್ಷಿದಾರರಲ್ಲಿ ಇದುವರೆಗೆ ಕೇವಲ 10 ಮಂದಿಯಷ್ಟೇ ವಿಚಾರಣೆಗೆ ಒಳಪಟ್ಟಿದ್ದಾರೆ ಎಂಬುದೂ ಗಮನಕ್ಕೆ ಬಂತು. ವಿಚಾರಣೆಯಲ್ಲಿ ವಿಳಂಬವಾಗುತ್ತಿರುವ ಕಾರಣ, ಉಳಿದ ಸಾಕ್ಷಿದಾರರ ವಿಚಾರಣೆ ಮುಗಿಯುವವರೆಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ದರ್ಶನ್ ಮನವಿ ಮಾಡಿದ್ದರು.
ಈ ವಿಷಯದ ಕುರಿತು ವಿವರವಾದ ವರದಿ ಕೇಳಿದ್ದ ಸುಪ್ರೀಂ ಕೋರ್ಟ್, ಇಂದು ಅಂತಿಮ ಆದೇಶ ಹೊರಡಿಸಿದೆ.
Advertisement