

ಚನ್ನಗಿರಿ (ದಾವಣಗೆರೆ): ಈಜಲು ಭದ್ರಾ ಕಾಲುವೆಗೆ ಇಳಿದಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ಚನ್ನಗಿರಿ ತಾಲ್ಲೂಕಿನ ಮರಬನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ವಿವೇಕ್ ಮತ್ತು ಮಾನಸಿ ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಸಿಬ್ಬಂದಿ ವಿವೇಕ್ ಅವರ ಶವವನ್ನು ಪತ್ತೆಹಚ್ಚಿದ್ದು, ಮಾನಸಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಪೊಲೀಸ್ ಮಾಹಿತಿಯ ಪ್ರಕಾರ, BIET ಕಾಲೇಜಿನ 10 ವಿದ್ಯಾರ್ಥಿಗಳ ಗುಂಪು ಬಸವಪಟ್ಟಣದ ದೇವಸ್ಥಾನ ಪ್ರವಾಸಕ್ಕೆ ತೆರಳಿತ್ತು. ಬಳಿಕ ಭದ್ರಾ ಬಲದಂಡೆ ಕಾಲುವೆಯಲ್ಲಿ ನೀರು ಹರಿಯುತ್ತಿರುವುದನ್ನು ಗಮನಿಸಿದ ಕೆಲ ವಿದ್ಯಾರ್ಥಿಗಳು ಈಜಲು ಇಳಿದಿದ್ದಾರೆ.
ಈ ವೇಳೆ ಮಾನಸಿ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದು, ಆಕೆಯನ್ನು ರಕ್ಷಿಸಲು ಇತರ ವಿದ್ಯಾರ್ಥಿಗಳು ಮಾನವ ಸರಪಳಿ ರೂಪಿಸಿ ಪ್ರಯತ್ನಿಸಿದ್ದಾರೆ. ಆದರೆ, ಸರಪಳಿಯ ಕೊನೆಯಲ್ಲಿ ಇದ್ದ ವಿವೇಕ್ ಕೂಡ ಸಮತೋಲನ ಕಳೆದುಕೊಂಡು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಬಸವಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಇಮ್ತಿಯಾಜ್ ಮಾಹಿತಿ ನೀಡಿದ್ದು, ವಿವೇಕ್ ಅವರ ಶವವನ್ನು ಪತ್ತೆಹಚ್ಚಲಾಗಿದೆ ಮತ್ತು ಮಾನಸಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Advertisement