

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಕಾರ್ಮಿಕ ಪದ್ಧತಿಯ ವಿರುದ್ಧ ಜಿಲ್ಲಾಡಳಿತ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಇಟ್ಟಿಗೆ ಕಾರ್ಖಾನೆಯಲ್ಲಿ ಅಮಾನವೀಯ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದ 10 ಮಕ್ಕಳು ಸೇರಿ 37 ಮಂದಿ ವಲಸೆ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ವಿಜಯನಗರ ಜಿಲ್ಲೆ ಮರಿಯಮ್ಮನಹಳ್ಳಿ ಹೋಬಳಿಯ ನಂದಿಬಂಡಿ ಗ್ರಾಮದ ಇಟ್ಟಿಗೆ ಕಾರ್ಖಾನೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಮೂಲದ ಎನ್ಜಿಒ ಸ್ಪಂದನಾ ನೀಡಿದ ಮಾಹಿತಿ ಆಧರಿಸಿ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರ ನಿರ್ದೇಶನದಲ್ಲಿ ದಾಳಿ ನಡೆಸಲಾಯಿತು.
ಸಹಾಯಕ ಆಯುಕ್ತ ವಿವೇಕಾನಂದ ನೇತೃತ್ವದ ತಂಡ ಇಟ್ಟಿಗೆ ಕಾರ್ಖಾನೆಯ ಮೇಲೆ ದಾಳಿ ನಡೆಸಿದ ವೇಳೆ ಕಾರ್ಮಿಕರು ಅತ್ಯಂತ ದುಸ್ಥಿತಿಯಲ್ಲಿ ವಾಸಿಸುತ್ತಿರುವುದು ಪತ್ತೆಯಾಯಿತು.
ರಕ್ಷಿಸಲ್ಪಟ್ಟವರಲ್ಲಿ 10 ಮಕ್ಕಳು, 11 ಮಹಿಳೆಯರು ಹಾಗೂ 16 ಪುರುಷರು ಸೇರಿದ್ದು, ಎಲ್ಲರೂ ಒಡಿಶಾದ ಬಾಲಂಗೀರ್ ಮತ್ತು ನಬರಂಗ್ಪುರ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಮಿಕರನ್ನು ನಾಲ್ಕು ಅಡಿ ಅಗಲದ ಸಣ್ಣ ಗುಡಿಸಲುಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಆರು ತಿಂಗಳ ಹಿಂದೆ ಉತ್ತಮ ಸಂಬಳ ಮತ್ತು ಉದ್ಯೋಗದ ಭರವಸೆ ನೀಡಿ ಇವರನ್ನು ಒಡಿಶಾದಿಂದ ವಿಜಯನಗರಕ್ಕೆ ಕರೆತರಲಾಗಿತ್ತು ಎನ್ನಲಾಗಿದೆ.
ಪ್ರತಿಯೊಬ್ಬ ಕಾರ್ಮಿಕನಿಹಗೂ ರೂ.40 ಸಾವಿರ ಮುಂಗಡ ಹಣ ನೀಡಿ ಇಲ್ಲಿ ಕರೆತಂದಿದ್ದರು. ಆರು ತಿಂಗಳ ಕಾಲ ಮಾತ್ರ ಕೆಲಸ ಮಾಡಿಸಿ, ಮಾಡಿದ ಕೆಲಸಕ್ಕೆ ತಕ್ಕಂತೆ ಸಂಬಳ ನೀಡಲಾಗುವುದು ಎಂದು ಕಾರ್ಖಾನೆ ಮಾಲೀಕರು ಭರವಸೆ ನೀಡಿದ್ದರು. ಆದರೆ, ವಾರಪೂರ್ತಿ ದುಡಿದರೂ ಕುಟುಂಬಕ್ಕೆ ಕೇವಲ ರೂ.500 ಮಾತ್ರ ನೀಡಲಾಗುತ್ತಿತ್ತು ಎಂದು ದೂರಿದ್ದಾರೆ.
ನಿಗದಿತ ಅವಧಿ ಪೂರ್ಣಗೊಂಡ ಬಳಿಕ ಕೆಲವರು ಊರಿಗೆ ಮರಳಲು ಯತ್ನಿಸಿದಾಗ, “ಮುಂಗಡ ಹಣ ಪಡೆದಿದ್ದೀರಿ, ಹೋಗಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಕಾರ್ಮಿಕರು ಹೊರಜಗತ್ತಿನವರೊಂದಿಗೆ ಸಂಪರ್ಕ ಸಾಧಿಸದಂತೆ ಕಾವಲುಗಾರರನ್ನು ನಿಯೋಜಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ಬಳಿಕ ಜಿಲ್ಲಾಡಳಿತ ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಬಂಧಿತ ಕಾರ್ಮಿಕ ಪದ್ಧತಿ ಹಾಗೂ ಮಾನವ ಕಳ್ಳಸಾಗಣೆ ಶಂಕೆಯಡಿ ತನಿಖೆ ಮುಂದುವರಿದಿದೆ.
Advertisement