

ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗಾಗಿ ರೈತರ ಭೂಮಿ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ. ಈ ಕ್ರಮ ರೈತರಿಗೆ ದ್ರೋಹವಾಗಿದ್ದು, ಸರ್ಕಾರ ರೈತರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಪ್ರದೇಶವು ತೆಂಗು, ಮಾವು, ರೇಷ್ಮೆ ಹಾಗೂ ಹಾಲು ಉತ್ಪಾದನೆಗೆ ಹೆಸರುವಾಸಿಯಾದ ಫಲವತ್ತಾದ ಕೃಷಿಭೂಮಿಯಾಗಿದೆ. ಇಂತಹ ಜಮೀನನ್ನು ಸರ್ಕಾರ ಕಬಳಿಸಲು ಯತ್ನಿಸುತ್ತಿದೆ ಎಂದು ದೂರಿದರು.
“ಡಿಸಿಎಂ ಡಿ.ಕೆ. ಶಿವಕುಮಾರ್ ನಡೆಸಿದ ಸಭೆಗಳಲ್ಲಿ ನಕಲಿ ರೈತರನ್ನು ಕರೆಸಿ ಭೂಸ್ವಾಧೀನಕ್ಕೆ ಬೆಂಬಲವಿದೆ ಎಂಬ ಚಿತ್ರಣ ಸೃಷ್ಟಿಸಲಾಗಿದೆ. ಆದರೆ, ನಿಜವಾದ ರೈತರು ತಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಿದರು.
ಬಿಡದಿ ರೈತರ ಹೋರಾಟಕ್ಕೆ ಬಿಜೆಪಿ ಆರಂಭದಿಂದಲೇ ಬೆಂಬಲ ನೀಡಿದ್ದು, ಮುಂದೆಯೂ ಅವರ ಪರ ನಿಲ್ಲಲಿದೆ ಎಂದು ತಿಳಿಸಿದರು.
ಬೆಂಗಳೂರಿನ ಸುತ್ತಮುತ್ತ ಈಗಾಗಲೇ ಸಾಕಷ್ಟು ಖಾಲಿ ಜಾಗಗಳಿವೆ. ಕೆಂಪೇಗೌಡ ಲೇಔಟ್ ಮತ್ತು ಶಿವರಾಮ ಕಾರಂತ ಲೇಔಟ್ಗಳಲ್ಲಿ ಲಕ್ಷಾಂತರ ಫ್ಲ್ಯಾಟ್ಗಳು ಮಾರಾಟವಾಗದೆ ಉಳಿದಿರುವಾಗ ಹೊಸ ಟೌನ್ಶಿಪ್ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಬಿಡದಿಯಲ್ಲೇ ಸುಮಾರು 3,000 ಎಕರೆ ಸರ್ಕಾರಿ ಜಮೀನು ಇದೆ. ಅದನ್ನು ಬಳಸದೇ ರೈತರ ಖಾಸಗಿ ಜಮೀನಿನ ಮೇಲೆ ಸರ್ಕಾರ ಕಣ್ಣು ಹಾಕಿದೆ” ಎಂದು ಆರೋಪಿಸಿದರು.
ಇದೇ ವೇಳೆ ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿಯಲ್ಲಿ ರಚನೆಯಾದ ಐದು ನಗರ ನಿಗಮಗಳಿಗೆ ಚುನಾವಣೆ ನಡೆಸುವುದನ್ನು ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಅಶೋಕ್ ಆರೋಪಿಸಿದರು.
ಸರ್ಕಾರ ಬಹಳ ಹಿಂದೆಯೇ ಚುನಾವಣೆ ನಡೆಸಬೇಕಾಗಿತ್ತು. ಆದರೆ, ಕಾಂಗ್ರೆಸ್ನ ಒಳಗಿನ ಸಮೀಕ್ಷೆಯೇ ಐದು ನಿಗಮಗಳಲ್ಲೂ ಸೋಲು ಖಚಿತ ಎಂದು ಹೇಳುತ್ತಿದೆ. ಅದಕ್ಕಾಗಿಯೇ ಚುನಾವಣೆ ಮುಂದೂಡಲಾಗುತ್ತಿದೆ” ಎಂದು ಹೇಳಿದರು.
ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಕಾಂಗ್ರೆಸ್ ಒಳಜಗಳದಿಂದ ಕಸದ ಸಮಸ್ಯೆ ಹೆಚ್ಚಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವವರೆಗೆ ಚುನಾವಣೆ ಮುಂದೂಡಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ನ್ಯಾಯಾಲಯ ನೀಡಿರುವ ಗಡುವಿನೊಳಗೆ ಚುನಾವಣೆ ನಡೆಸಬೇಕು. ಬಿಜೆಪಿ ಚುನಾವಣೆ ಎದುರಿಸಲು ಸಿದ್ಧವಾಗಿದ್ದು, ಸರ್ಕಾರ ಕೂಡಲೇ ಚುನಾವಣಾ ದಿನಾಂಕ ಘೋಷಿಸಬೇಕು ಎಂದು ಆಗ್ರಹಿಸಿದರು.
Advertisement