

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಸಂಬಂಧಿಸಿದ ಸಭೆಗೆ ಗೈರಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಪದಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ 3 ಉಪಾಧ್ಯಕ್ಷರು ಹಾಗೂ 29 ಪ್ರಧಾನ ಕಾರ್ಯದರ್ಶಿಗಳನ್ನು ಹುದ್ದೆಯಿಂದ ವಜಾಗೊಳಿಸಿದ್ದಾರೆ.
ಶಿಸ್ತು ಉಲ್ಲಂಘಿಸಿದ ಪದಾಧಿಕಾರಿಗಳನ್ನು ವಜಾಗೊಳಿಸಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಮೇ 24 ರಂದು ಬೆಂಗಳೂರಿನ ಹೊರವಲಯದಲ್ಲಿಎಸ್ಐಆರ್ ಪ್ರಕ್ರಿಯೆ, ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ, ಪಕ್ಷ ಸಂಘಟನೆ ಕುರಿತ ಪೂರ್ವಭಾವಿ ಸಭೆ ನಡೆದಿತ್ತು.
ಕೆಪಿಸಿಸಿ ಉಪಾಧ್ಯಕ್ಷರಾದ ಕೆ. ಶಿವಮೂರ್ತಿ (ದಾವಣಗೆರೆ), ಬಾಬುರಾವ್ ಜಗೀರ್ದಾರ್ (ಕಲಬುರಗಿ) ಮತ್ತು ಎಂಸಿ ವೇಣುಗೋಪಾಲ್ (ಬೆಂಗಳೂರು) ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.
ಇನ್ನುಳಿದಂತೆ, ಪ್ರಧಾನ ಕಾರ್ಯದರ್ಶಿಗಳಾದ ಕೆಪಿಸಿಸಿ ವಕ್ತಾರ ತುಮಕೂರಿನ ನಿಕೇತ್ ರಾಜ್ ಮೌರ್ಯ, ನಟಿ ಭಾವನಾ ರಾಮಣ್ಣ, ಕೆಸಿ ಪ್ರಭಾಕರ್ ರೆಡ್ಡಿ, ತಿಬ್ಬೇಗೌಡ, ಜುಲ್ಫಿಕರ್ ಅಹ್ಮದ್, ಶಂಕರ್ ದೊಡ್ಡಿ, ರೇಖಾ ಹುಲಿಯಪ್ಪ, ಎಚ್ಎ ಷಣ್ಮುಗಪ್ಪ, ಎಂ ರಾಮಪ್ಪ, ಷಣ್ಮುಗಪ್ಪ ಶಿವಳ್ಳಿ, ಸಿಆರ್ ಮನೋಹರ್, ಎಚ್ಆರ್ ಶ್ರೀನಾಥ್, ನಾಗೇಶ್ವರ್ ರಾವ್ ಸೇರಿದಂತೆ 29 ಪ್ರಧಾನ ಕಾರ್ಯದರ್ಶಿಗಳಿಗೆ ಡಿಕೆ ಶಿವಕುಮಾರ್ ಗೇಟ್ ಪಾಸ್ ನೀಡಿದ್ದಾರೆ.
ಪಕ್ಷದ ಸಭೆಗೆ ಗೈರಾಗಿರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸೂಚಿಸಿದ್ದರು. ಈ ಸೂಚನೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರು ಕ್ರಮ ಕೈಗೊಂಡಿದ್ದಾರೆ.
Advertisement