

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಹೊರಗೆ ತಮ್ಮ ಕಾರಿನ ಚಾಲಕನಿಗಾಗಿ ಸುಮಾರು ಐದು ನಿಮಿಷಗಳ ಕಾಲ ಕಾದು ನಿಂತ ಬೆಳವಣಿಗೆ ಸೋಮವಾರ ಕಂಡು ಬಂದಿತು.
ವಿಧಾನಸೌಧದ ಪಶ್ಚಿಮ ದ್ವಾರದಿಂದ ತಮ್ಮ ಕೆಲಸಗಳನ್ನು ಮುಗಿಸಿ ಹೊರಬಂದ ಡಿಕೆ ಶಿವಕುಮಾರ್ ಅವರು, ತಮಗಾಗಿ ಸಿದ್ಧಪಡಿಸಲಾಗಿದ್ದ ಅಧಿಕೃತ ವಾಹನದತ್ತ ತೆರಳಿದರು. ಆದರೆ, ಅವರು ಕಾರಿನ ಬಳಿ ತಲುಪಿದಾಗ ಚಾಲಕ ಅಲ್ಲಿರಲಿಲ್ಲ.
ಚಾಲಕ ಬಾರದ ಹಿನ್ನೆಲೆಯಲ್ಲಿ ಸಿಎಂ ಸುಮಾರು ಐದು ನಿಮಿಷ ವಾಹನದ ಬಳಿ ಕಾದು ನಿಂತಿದ್ದರು. ವಿಳಂಬವಾಗುತ್ತಿರುವುದನ್ನು ಗಮನಿಸಿದ ಅವರ ವೈಯಕ್ತಿಕ ಸಿಬ್ಬಂದಿ ಪರ್ಯಾಯ ವಾಹನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಸಿಎಂ ಸುತ್ತ ಸಾರ್ವಜನಿಕರು ಕೂಡ ಜಮಾಯಿಸಿ, ತಮ್ಮ ಅಹವಾಲುಗಳನ್ನು ಸಲ್ಲಿಸಲು ಹಾಗೂ ವಿವಿಧ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲು ಮುಂದಾದರು.
ಪರ್ಯಾಯ ವಾಹನದ ವ್ಯವಸ್ಥೆ ಮಾಡಲಾಗುತ್ತಿದ್ದಂತೆಯೇ ಚಾಲಕ ಆತುರವಾಗಿ ಕಾರಿನ ಬಳಿ ಆಗಮಿಸಿದರು. ಬಳಿಕ ಡಿಕೆ ಶಿವಕುಮಾರ್ ಅವರು ಅದೇ ವಾಹನದಲ್ಲಿ ಮನೆಗೆ ತೆರಳಿದರು.