

ಚಿಕ್ಕಬಳ್ಳಾಪುರ: 20 ವರ್ಷಗಳಿಂದ ಅಲೆಯುತ್ತಿದ್ದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಮತ್ತು ಕಾನೂನು ಪ್ರಕಾರ ಜಮೀನು ಮಂಜೂರು ಮಾಡುತ್ತಿಲ್ಲ ಎಂದು ಆರೋಪಿಸಿ ಕಾರ್ಗಿಲ್ ಯೋಧ, ಮಾಜಿ ಸೈನಿಕ ಶಿವಾನಂದರೆಡ್ಡಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಈ ಘಟನೆ ಆಗಸ್ಟ್ 28 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿರುವ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದಿದೆ ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಮರಾಠಾ ಲೈಟ್ ಇನ್ಫೆಂಟ್ರಿಯಲ್ಲಿ ಸೇವೆ ಸಲ್ಲಿಸಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಗಾಯಗೊಂಡಿದ್ದ ನಿವೃತ್ತ ಸೈನಿಕ ಶಿವಾನಂದ ರೆಡ್ಡಿ, ತಮ್ಮ ಮಿಲಿಟರಿ ಸೇವೆಯನ್ನು ಗುರುತಿಸಿ ತಮಗೆ ಶಿಫಾರಸು ಮಾಡಲಾದ ಜಮೀನು ಮಂಜೂರು ಮಾಡಲು ವಿಳಂಬ ಮಾಡಲಾಗುತ್ತಿದೆ ಎಂದು ಹೇಳಿದ್ದು, ಇದರಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೂಡಲೇ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ರವಾನಿಸಿದ್ದಾರೆ. ಸದ್ಯ ರೆಡ್ಡಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಾನಂದರೆಡ್ಡಿ 1987 ರಲ್ಲಿ ಸೈನ್ಯಕ್ಕೆ ಸೇರಿ 2004 ರಲ್ಲಿ ನಿವೃತ್ತಿಯಾಗಿದ್ದಾರೆ. 1999 ಕಾರ್ಗಿಲ್ ಸಮಯದಲ್ಲಿ ಕಾಲಿಗೆ ಪೆಟ್ಟುಬಿದ್ದು 2004 ರಲ್ಲಿ ಕಡ್ಡಾಯ ನಿವೃತ್ತಿ ಪಡೆದರು. ಕಾಲಿಗೆ ಪೆಟ್ಟಾದಾಗ 2000ರಲ್ಲಿ ವಿಶ್ರಾಂತಿಗಾಗಿ ಬೆಳಗಾವಿಗೆ ಕಳುಹಿಸಿದರು. ನನಗೆ ಜಮೀನು ನೀಡುವಂತೆ ಕರ್ನಲ್ ಎಂ.ಬಿ.ರಾಣಾ ಅವರು, ಡಿಸಿ, ತಹಶೀಲ್ದಾರ್ ಸೈನಿಕ ಕ್ಷೇಮಾಭಿವೃದ್ಧಿ ಬೋರ್ಡ್ ಗೆ ಶಿಪಾರಸ್ ಮಾಡಿದ್ದರು ಎಂದು ಶಿವಾನಂದರೆಡ್ಡಿ ತಿಳಿಸಿದ್ದಾರೆ.
ಇಲ್ಲಿಗೆ ಬಂದಾಗ ಯಾವುದೇ ಜಮೀನು ಮಂಜೂರು ಮಾಡಿರಲಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸಿದಾಗ ತಾಲ್ಲೂಕಿನಲ್ಲಿ ಯಾವುದೇ ಜಮೀನಿಲ್ಲ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಜಮೀನಿದೆ. ಅಲ್ಲಿಗೆ ಹೋಗಿ ಎಂದು 2004 ರಲ್ಲಿ ಪತ್ರ ನೀಡಿದರು. 2019-20 ರಲ್ಲಿ ಸುಮಾರು ಜನ ಯೋದರರಿಗೆ ಜಮೀನು ನೀಡುತ್ತಾರೆ. ನನಗೆ ಮಾತ್ರ ನೀಡಲಿಲ್ಲ. 2020 ರಿಂದ ಹೋರಾಟ ಮಾಡುತ್ತಿದ್ದರೂ ಯಾವ ಅಧಿಕಾರಿಯೂ ಕನಿಕರ ತೋರಲಿಲ್ಲ ಎಂದು ಹೇಳಿದ್ದಾರೆ.