

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ಸಂದರ್ಶನವನ್ನು ಕೈಬಿಟ್ಟು, ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಸಾಧನೆಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಉಪಾಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಎಸ್.ಎ. ಹುಸೇನ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು, “ಸಂದರ್ಶನವು ಆಯ್ಕೆ ಪ್ರಕ್ರಿಯೆಯಲ್ಲಿನ ಒಂದು ಹಂತವಾಗಿದ್ದು, ನಂತರ ಅದನ್ನು ಮರುಪರಿಶೀಲಿಸಲು ಸಾಧ್ಯವಾಗುವ ರೀತಿಯಲ್ಲಿ ಯಾವುದೇ ದಾಖಲೆ ಉಳಿಯುವುದಿಲ್ಲ. ಅಭ್ಯರ್ಥಿಯ ಉತ್ತರ ಪತ್ರಿಕೆ ಇಲ್ಲ, ಒಎಂಆರ್ ಶೀಟ್ ಇಲ್ಲ, ಅಭ್ಯರ್ಥಿಯ ಫಲಿತಾಂಶವನ್ನು ಪರಿಶೀಲಿಸಲು ಸಾಧ್ಯವಾಗುವಂತಹ ಉತ್ತರ ಕೀ ಕೂಡ ಇರುವುದಿಲ್ಲ ಎಂದು ಹೇಳಿದ್ದಾರೆ.
ಸಂದರ್ಶನವು ಅಭ್ಯರ್ಥಿಯ ಅರ್ಹತೆಯನ್ನು ಅಳೆಯುವಲ್ಲಿ ಬಹಳ ಕಡಿಮೆ ಕೊಡುಗೆ ನೀಡುತ್ತದೆ. ಆದರೆ, ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ಧಾರ ಕೈಗೊಳ್ಳುವ ವಿವೇಚನಾಧಿಕಾರದ ಬಹುಪಾಲು ಈ ಹಂತದಲ್ಲೇ ಇರುತ್ತದೆ.
ಸಂದರ್ಶನವನ್ನು ತೆಗೆದುಹಾಕುವುದರಿಂದ ಆಯ್ಕೆಯ ಗುಣಮಟ್ಟಕ್ಕೆ ರಾಜ್ಯಕ್ಕೆ ಯಾವುದೇ ದೊಡ್ಡ ನಷ್ಟವಾಗುವುದಿಲ್ಲ. ಜೊತೆಗೆ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದ ಒಂದು ಹಂತವನ್ನು ತೆಗೆದುಹಾಕಿದಂತಾಗುತ್ತದೆ.
ಕೆಪಿಎಸ್ಸಿಯಲ್ಲಿ ಅಕ್ರಮಗಳ ಆರೋಪಗಳು ಕಳೆದ ಸುಮಾರು ಮೂರು ದಶಕಗಳಿಂದ ಮತ್ತೆ ಮತ್ತೆ ಕೇಳಿಬರುತ್ತಿವೆ. ಪ್ರತಿಬಾರಿಯೂ ಆರೋಪಗಳು ಕೇಳಿಬಂದಾಗ ಆರೋಪಪಟ್ಟಿ ಸಲ್ಲಿಕೆ, ತನಿಖೆ, ಮರುಪರೀಕ್ಷೆ ಅಥವಾ ಅಧಿಕಾರಿಗಳ ವರ್ಗಾವಣೆಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನಮ್ಮ ಸರ್ಕಾರ ನ್ಯಾಯಯುತ ತನಿಖೆಗೆ ಅವಕಾಶ ನೀಡಿದೆ. ಆದರೆ ಬದಲಾಗದೆ ಉಳಿದಿರುವುದು ವ್ಯವಸ್ಥೆಯ ರಚನೆ. ಪ್ರತಿಯೊಂದು ಪ್ರಕರಣದಲ್ಲೂ ಮತ್ತೆ ಮತ್ತೆ ಎದುರಾಗುತ್ತಿರುವ ಮೂರು ಹಂತಗಳೆಂದರೆ ಪ್ರಶ್ನೆಪತ್ರಿಕೆಯ ಭದ್ರತೆ, ಉತ್ತರ ಪತ್ರಿಕೆಯ ಮೌಲ್ಯಮಾಪನ ಹಾಗೂ ಸಂದರ್ಶನದಲ್ಲಿ ಲಭ್ಯವಿರುವ ವಿವೇಚನಾಧಿಕಾರ.
ಹೀಗಾಗಿ ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಹಾಗೂ ಪರಿಶೀಲನೆಗೆ ಒಳಪಡಬಹುದಾದ ರೀತಿಯಲ್ಲಿ ರೂಪಿಸಲು ಲಿಖಿತ ಪರೀಕ್ಷೆಯ ಸಾಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.