

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ವಾರ್ಡರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಮಂಗಳೂರಿನ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳಾದ ನಯಾಜ್, ಕಲಂದರ್ ಶಫಿ, ಮೊಹಮ್ಮದ್ ಮುಜಾಮಿಲ್, ಅಬ್ದುಲ್ ಶಫಾನ್ ಹಾಗೂ ರಿಜ್ವಾನ್ ಸೇರಿ ಐವರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 22ರಂದು ವಿಡಿಯೋ ಕಾನ್ಫರೆನ್ಸ್ ಇದ್ದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಅನೆಕ್ಸ್-1 ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಕೈದಿಗಳ ವಸ್ತುಗಳನ್ನು ಮಂಜುನಾಥ್ ತಪಾಸಣೆ ಮಾಡಿದ್ದರು.
ಹೆಚ್ಚುವರಿ ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ನೀಡಿರಲಿಲ್ಲ. ಇದೇ ವಿಚಾರಕ್ಕೆ ಆರೋಪಿಗಳು ಹಾಗೂ ಜೈಲಿನ ಸಿಬ್ಬಂದಿಯ ನಡುವೆ ಅಂದು ವಾಗ್ವಾದ ನಡೆದಿತ್ತು. ಕೈದಿಗಳ ಅಕ್ರಮ ಚಟುವಟಿಕೆಗಳ ಬಗ್ಗೆಯೂ ಅಧಿಕಾರಿಗಳಿಗೆ ವಾರ್ಡರ್ ತಿಳಿಸುತ್ತಿದ್ದರು. ಮಂಜುನಾಥ್ ವಿರುದ್ಧ ಕೈದಿಗಳು ದ್ವೇಷ ಸಾಧಿಸಿ ಹಲ್ಲೆ ನಡೆಸಿದ್ದಾರೆ’ ಎಂದು ತಿಳಿಸಿವೆ.
ಅದೇ ದ್ವೇಷದಲ್ಲಿ ಕೈದಿಗಳು ಸೆ.2ರಂದು ಮಂಜುನಾಥ್ ಅವರನ್ನು ಕೊಠಡಿ ಸಂಖ್ಯೆ 4ಕ್ಕೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ. ರಕ್ತ ಬರುವಂತೆ ಥಳಿಸಿದ್ದಲ್ಲದೆ, ಕತ್ತು ಹಿಸುಕಿ ಹತ್ಯೆಗೂ ಯತ್ನಿಸಿದ್ದಾರೆ. ಇತರ ಸಿಬ್ಬಂದಿಗಳು ನೆರವಿಗೆ ಧಾವಿಸಿ ಮಂಜುನಾಥ್ ಅವರನ್ನು ರಕ್ಷಿಸಿದ್ದಾರೆ.
ದೂರಿನ ಆಧಾರದ ಮೇಲೆ, ಪರಪ್ಪನ ಅಗ್ರಹಾರ ಪೊಲೀಸರು ಐದು ವಿಚಾರಣಾಧೀನ ಕೈದಿಗಳ ವಿರುದ್ಧ ಸೆಕ್ಷನ್ 109 (ಕೊಲೆ ಯತ್ನ), 132 (ಸಾರ್ವಜನಿಕ ಸೇವಕನ ವಿರುದ್ಧ ಹಲ್ಲೆ) ಮತ್ತು ಬಿಎನ್ಎಸ್ನ ಇತರ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.