

ಮಡಿಕೇರಿ: ಪ್ರವಾಸಿಗರಿಗೆ ಅರಣ್ಯ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಸುರಕ್ಷತಾ ಕಾರಣಗಳಿಗಾಗಿ ಕಳೆದ ನಾಲ್ಕು ತಿಂಗಳಿನಿಂದ ಮುಚ್ಚಲಾಗಿದ್ದ ಕೊಡಗಿನ ಪ್ರಸಿದ್ಧ ಹಾರಂಗಿ ಮತ್ತು ಮೈಸೂರು ಗಡಿಯ ಬಳಿಯಿರುವ ಮತ್ತಿಗೋಡು ಆನೆ ಶಿಬಿರಗಳನ್ನು ಇಂದಿನಿಂದ (ಶನಿವಾರ) ಸಾರ್ವಜನಿಕರ ವೀಕ್ಷಣೆಗೆ ಅಧಿಕೃತವಾಗಿ ಮುಕ್ತಗೊಂಡಿವೆ. ಆದರೆ, ಪ್ರವಾಸಿಗರ ನೆಚ್ಚಿನ ತಾಣವಾದ ದುಬಾರೆ ಆನೆ ಶಿಬಿರವು ಇನ್ನು ಕೆಲವು ದಿನಗಳ ಕಾಲ ಮುಚ್ಚಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ನಡೆದ ದುರಂತದಲ್ಲಿ ಪ್ರವಾಸಿಗರೊಬ್ಬರು ಹಾಗೂ ಸಾಕಿದ್ದ ಆನೆಯೊಂದು ಮೃತಪಟ್ಟಿದ್ದವು. ಘಟನೆಯ ಬಳಿಕ ರಾಜ್ಯದ ಎಲ್ಲ ಆನೆ ಶಿಬಿರಗಳಲ್ಲಿನ ಪ್ರವಾಸಿಗರ ಚಟುವಟಿಕೆಗಳನ್ನು ಅರಣ್ಯ ಇಲಾಖೆ ಸ್ಥಗಿತಗೊಳಿಸಿ, ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿತ್ತು.
ಇದೀಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಸ್ಒಪಿ ಅನ್ವಯ ಶಿಬಿರಗಳನ್ನು ಪುನರಾರಂಭಿಸಲಾಗಿದೆ. ಹೊಸ ನಿಯಮಗಳಡಿ ಪ್ರವಾಸಿಗರು ಆನೆಗಳೊಂದಿಗೆ ನೇರ ಸಂಪರ್ಕ ಹೊಂದುವುದಕ್ಕೆ ಹೆಚ್ಚಿನ ನಿರ್ಬಂಧ ವಿಧಿಸಲಾಗಿದೆ.
ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್ ಮಾತನಾಡಿ, ಪ್ರವಾಸಿಗರಿಗೆ ಸಾಕಿದ ಆನೆಗಳನ್ನು ಮುಟ್ಟಲು ಅಥವಾ ಅವುಗಳ ಸಮೀಪಕ್ಕೆ ತೆರಳಲು ಇನ್ನು ಮುಂದೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರವಾಸಿಗರ ಭೇಟಿಯ ಸಮಯದಲ್ಲಿ ಪ್ರತಿಯೊಂದು ಆನೆಯೂ ತನ್ನ ಮಾವುತನ ಮೇಲ್ವಿಚಾರಣೆಯಲ್ಲಿರಲಿದೆ. ಆನೆಗಳ ಆವರಣದೊಳಗೆ ಅರಣ್ಯ ಇಲಾಖೆ ಸಿಬ್ಬಂದಿ, ಮಾವುತರು ಹಾಗೂ ಅಧಿಕೃತ ಸಿಬ್ಬಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಹೊಸ ಸುರಕ್ಷತಾ ಕ್ರಮಗಳ ಭಾಗವಾಗಿ ಆನೆಗಳ ಆವರಣದ ಸುತ್ತ ರೈಲ್ವೆ ಮಾದರಿಯ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಅರಣ್ಯ ಸಿಬ್ಬಂದಿಯೂ ಈ ತಡೆಗೋಡೆಗಳನ್ನು ದಾಟುವಂತಿಲ್ಲ. ಪ್ರವಾಸಿಗರು ಆನೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸುಮಾರು 10 ಮೀಟರ್ ದೂರದಲ್ಲಿ ನಿರ್ಮಿಸಿರುವ ಮತ್ತೊಂದು ಹಸಿರು ಬಣ್ಣದ ತಡೆಗೋಡೆಯ ಹಿಂದೆಯೇ ಇರಬೇಕು. ಪ್ರಸ್ತುತ ಹರಂಗಿ ಆನೆ ಶಿಬಿರದಲ್ಲಿ ಆರು ಆನೆಗಳಿದ್ದು, ಮತ್ತಿಗೋಡು ಶಿಬಿರದಲ್ಲಿ 12 ಆನೆಗಳಿವೆ.
ಇದೇ ವೇಳೆ, ಮೇ ತಿಂಗಳಲ್ಲಿ ಮಾರಣಾಂತಿಕ ಘಟನೆ ನಡೆದಿದ್ದ ದುಬಾರೆ ಆನೆ ಶಿಬಿರವನ್ನು ಮುಂದಿನ ಆದೇಶದವರೆಗೆ ಪ್ರವಾಸಿಗರಿಗೆ ಮುಚ್ಚಿಯೇ ಇಡಲಾಗಿದೆ. ಶಿಬಿರವನ್ನು ಯಾವಾಗ ಪುನರಾರಂಭಿಸಲಾಗುತ್ತದೆ ಎಂಬುದನ್ನು ಅರಣ್ಯ ಇಲಾಖೆ ಇನ್ನೂ ಪ್ರಕಟಿಸಿಲ್ಲ.