

ಬೆಂಗಳೂರು: ಶಿಕ್ಷಕರ ದಿನಾಚರಣೆ ದಿನವಾದ ಇಂದು ರಾಜ್ಯದ ಶಿಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇನ್ಮುಂದೆ ತಮ್ಮ ಹೆಸರಿನ ಮುಂದೆ “Tr.” ಎಂದು ಬರೆದುಕೊಳ್ಳಬಹುದು. ಹೌದು, ಡಾಕ್ಟರ್ 'Dr', ಇಂಜಿನಿಯರ್ Er' ಮತ್ತು ಪ್ರೊಫೆಸರ್ 'Prof'ಅಂತಾ ತಮ್ಮ ಹೆಸರಿನ ಮುಂದೆ ಬಳಸುವಂತೆ ಶಿಕ್ಷಕರು ಕೂಡಾ ತಮ್ಮ ಹೆಸರಿನ ಮುಂದೆ “Tr.” ಎಂದು ಬರೆದುಕೊಳ್ಳಬಹುದಾಗಿದೆ.
ಹೀಗಂತಾ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಘೋಷಿಸಿದ್ದಾರೆ. ಸಮಾಜಕ್ಕೆ ಅವರು ಸಲ್ಲಿಸುವ ನಿಸ್ವಾರ್ಥ ಸೇವೆಗಾಗಿ ಇಂದಿನಿಂದ ರಾಜ್ಯದ ಶಿಕ್ಷಕರೆಲ್ಲರೂ ತಮ್ಮ ಹೆಸರಿನ ಮುಂದೆ ಹೆಮ್ಮೆಯಿಂದ “Tr.” (ಟೀಚರ್) ಎಂಬ ಗೌರವಸೂಚಕ ಪದವನ್ನು ಬಳಸಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ರಾಷ್ಟ್ರವನ್ನು ಕಟ್ಟುವ ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ, ಆ ವ್ಯಕ್ತಿಯನ್ನು ರೂಪಿಸಿದ ಒಬ್ಬ ಶಿಕ್ಷಕರಿರುತ್ತಾರೆ. ಕರ್ನಾಟಕದ ಸುಮಾರು 4.5 ಲಕ್ಷ ಶಿಕ್ಷಕರೂ ಸೇರಿದಂತೆ, ಭಾರತದ ಒಂದು ಕೋಟಿಗೂ ಅಧಿಕ ಶಿಕ್ಷಕರು ಪ್ರತಿದಿನವೂ ಮಕ್ಕಳ ಮನಸ್ಸು, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿದ್ದಿ ತೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿದ್ದಾರೆ.
ರೋಗ ಗುಣಪಡಿಸುವ ವೈದ್ಯರಿರಲಿ, ನಾಡು ಕಟ್ಟುವ ಎಂಜಿನಿಯರಿರಲಿ, ಅನ್ನ ನೀಡುವ ರೈತನಿರಲಿ, ಸೇವೆ ಸಲ್ಲಿಸುವ ಅಧಿಕಾರಿಯಿರಲಿ, ನಾವೀನ್ಯತೆ ತರುವ ಉದ್ಯಮಿಯಿರಲಿ ಅಥವಾ ಸಮಾಜವನ್ನು ಮುನ್ನಡೆಸುವ ನಾಯಕರೇ ಇರಲಿ, ಪ್ರತಿಯೊಬ್ಬರ ಹಿಂದೆಯೂ ಶಿಕ್ಷಕರ ಶ್ರಮವಿದೆ. ಮಕ್ಕಳ ಸಾಮರ್ಥ್ಯವನ್ನು ಮೊದಲು ಗುರುತಿಸಿ, ‘ಸಾಧಿಸುವುದು ನಿನಗೆ ಸಾಧ್ಯ’ ಎಂದು ಆತ್ಮವಿಶ್ವಾಸ ತುಂಬುವವರು ಶಿಕ್ಷಕರು. ಈ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ಶಿಕ್ಷಕರ ಈ ಅಮೂಲ್ಯ ಕೊಡುಗೆಗೆ ಗೌರವ ಸಲ್ಲಿಸಲು ಕರ್ನಾಟಕ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇಂದಿನಿಂದ, ಕರ್ನಾಟಕದ ಶಿಕ್ಷಕರೆಲ್ಲರೂ ತಮ್ಮ ಹೆಸರಿನ ಮುಂದೆ ಹೆಮ್ಮೆಯಿಂದ “Tr.” (ಟೀಚರ್) ಎಂಬ ಗೌರವಸೂಚಕ ಪದವನ್ನು ಬಳಸಿ ಎಂದು ಕರೆ ನೀಡಿದ್ದಾರೆ.
ಈ ಪದದ ಹಿಂದೆ ಶಿಕ್ಷಕರ ಜೀವನಪರ್ಯಂತದ ನಿಸ್ವಾರ್ಥ ಸೇವೆಯಿದೆ. “Tr.” ಎನ್ನುವುದು ಕೇವಲ ಒಂದು ಬಿರುದಲ್ಲ; ಪರರ ಬದುಕನ್ನು ರೂಪಿಸುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಿಸ್ವಾರ್ಥ ಚೇತನಗಳಿಗೆ ಇಡೀ ಸಮಾಜವು ಸಲ್ಲಿಸುತ್ತಿರುವ ಕೃತಜ್ಞತೆ. ಯಾವ ಸಮಾಜ ಶಿಕ್ಷಕರನ್ನು ಗೌರವಿಸುತ್ತದೆಯೋ, ಆ ಸಮಾಜದ ಭವಿಷ್ಯವೂ ಅಷ್ಟೇ ಉಜ್ವಲವಾಗಿರುತ್ತದೆ. ನಡೆವ ದಾರಿ ತೋರಿ, ನಡತೆಯನ್ನು ತಿದ್ದಿ, ಕನಸುಗಳಿಗೆ ಆಕಾಶ ತೆರೆದಿಟ್ಟು, ನಮ್ಮ ಸಾಮರ್ಥ್ಯದ ಮೇಲೆ ಮೊದಲು ವಿಶ್ವಾಸವಿಟ್ಟ ಪ್ರತಿಯೊಬ್ಬ ಶಿಕ್ಷಕರಿಗೂ ಕರ್ನಾಟಕದ ಜನತೆಯ ಪರವಾಗಿ ಕೋಟಿ ಕೋಟಿ ನಮನಗಳು. “Tr.” ಎಂಬುದು ನಿಮ್ಮ ನಿಸ್ವಾರ್ಥ ಸೇವೆಗೆ ಸಂದಿರುವ ಅರ್ಹ ಗೌರವ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.