

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮೂಲಕ 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ಇಲಾಖೆ (ಸಿಐಡಿ), ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ (41) ಅವರ ಪಾತ್ರದ ಬಗ್ಗೆ ಸುಳಿವು ಪಡೆಯಲು ಕೆಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಯೊಬ್ಬರ ಹೇಳಿಕೆ ಪ್ರಮುಖ ಕಾರಣವಾಗಿದೆ.
ಸುಮಾರು 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಒಎಂಆರ್ (OMR) ಶೀಟ್ ತಿದ್ದುಪಡಿ ಮಾಡಿ ಅಕ್ರಮ ಎಸಗಲಾಗಿತ್ತು.
ಈ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಮೊಹಮ್ಮದ್ ಸುಹೇಲ್ ಬಂದೆಂಗೋಲ್ (30) ಎಂಬ ಅಭ್ಯರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಗರಣದ ಅಸಲಿ ಮುಖವಾಡ ಕಳಚಿಬಿದ್ದಿದೆ.
"ಡಿಸೆಂಬರ್ 2025 ರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಕರೆ ಮಾಡಿ, ರೂ.40 ಲಕ್ಷ ನೀಡಿದರೆ ಹುದ್ದೆ ಕೊಡಿಸುವುದಾಗಿ ಡೀಲ್ ಕುದುರಿಸಿದ್ದ. ನಾನು ಮುಂಗಡವಾಗಿ ರೂ.20 ಲಕ್ಷ ನೀಡಿದ್ದೆ" ಎಂದು ಸುಹೇಲ್ ಸಿಐಡಿ ಮುಂದೆ ಒಪ್ಪಿಕೊಂಡಿದ್ದಾನೆ.
ಅಭ್ಯರ್ಥಿ ಸುಹೇಲ್ ನೀಡಿದ ಸುಳಿವಿನ ಆಧಾರದ ಮೇಲೆ ತಾಂತ್ರಿಕ ಮತ್ತು ಸಿಡಿಆರ್ (CDR) ವಿಶ್ಲೇಷಣೆ ನಡೆಸಿದ ಸಿಐಡಿ ಅಧಿಕಾರಿಗಳಿಗೆ ದಲ್ಲಾಳಿ ಬಸವರಾಜ್ ಕನ್ನಾಳೆ ಎಂಬಾತನ ನೆಟ್ವರ್ಕ್ ಪತ್ತೆಯಾಗಿದೆ.
ಈ ಬಸವರಾಜ್ ಕನ್ನಾಳೆ, ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಿರುವುದು ತನಿಖೆಯಲ್ಲಿ ಸಾಬೀತಾಗಿದೆ. 2016 ರ ಬ್ಯಾಚ್ನ ಐಎಎಸ್ ಅಧಿಕಾರಿಯಾದ ಗಂಗ್ವಾರ್, ಫೆಬ್ರವರಿ 2024 ರಿಂದ ಮಾರ್ಚ್ 2026 ರವರೆಗೆ ಪರೀಕ್ಷಾ ನಿಯಂತ್ರಕರಾಗಿದ್ದರು. ಇದೇ ಅವಧಿಯಲ್ಲಿಯೇ ಈ ದೊಡ್ಡ ಹಗರಣ ನಡೆದಿದೆ.
ವಿಚಾರಣೆ ವೇಳೆ ಹಲವು ಅಭ್ಯರ್ಥಿಗಳು ಹುದ್ದೆಗಾಗಿ ರೂ.40 ಲಕ್ಷದಿಂದ ರೂ.80 ಲಕ್ಷದವರೆಗೆ ದಲ್ಲಾಳಿಗಳಿಗೆ ಹಣ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಸದ್ಯ ಸಿಐಡಿ ಅಧಿಕಾರಿಗಳು ದಲ್ಲಾಳಿ ಕನ್ನಾಳೆಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದ್ದು, 17 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ. ಗಂಗ್ವಾರ್ ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರಾದರೂ, ಅವರ ಅಧಿಕೃತ ಒಪ್ಪಿಗೆಯ ನಂತರವೇ ಪ್ರಶ್ನೆ ಪತ್ರಿಕೆ ಮುದ್ರಣವಾಗಿರುವುದರಿಂದ ಅವರ ಪಾತ್ರದ ಬಗ್ಗೆ ತೀವ್ರ ವಿಚಾರಣೆ ಮುಂದುವರಿದಿದೆ. ಕಳೆದ ಎರಡು ವರ್ಷಗಳಲ್ಲಿ ನಡೆದ ಇತರ ಕೆಪಿಎಸ್ಸಿ ಪರೀಕ್ಷೆಗಳಿಗೂ ಈ ಜಾಲ ಹರಡಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿದೆ.
ತನಿಖೆ ಮುಂದುವರಿದಂತೆ ಬಸವರಾಜ್ ಕನ್ನಾಳೆ ಅವರು ಗ್ಯಾಂಗ್ವಾರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದು ಬೆಳಕಿಗೆ ಬಂದಿದೆ. ಆದರೆ, ಕನ್ನಾಳೆ ಅವರೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಗ್ಯಾಂಗ್ವಾರ್ ನಿರಾಕರಿಸಿದ್ದಾರೆ.
ಕನ್ನಾಳೆ ಮತ್ತು ಗಂಗ್ವಾರ್ ನಡುವೆ ಸಂಪರ್ಕವಿತ್ತು ಎಂಬುದಕ್ಕೆ ಸಾಕ್ಷ್ಯಗಳು ಲಭ್ಯವಾದ ಬಳಿಕ, ಹೆಚ್ಚಿನ ವಿಚಾರಣೆಗಾಗಿ ಗ್ಯಾಂಗ್ವಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮೂಲದ 2016ನೇ ಬ್ಯಾಚ್ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಗಂಗ್ವಾರ್ ಅವರನ್ನು ಭ್ರಷ್ಟಾಚಾರ ಮತ್ತು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಅವರು 2024ರಿಂದ 2026ರ ಮಾರ್ಚ್ವರೆಗೆ ಕೆಪಿಎಸ್ಸಿಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು.