

ಮಂಡ್ಯ: ಹೆದ್ದಾರಿಗಳಲ್ಲಿ ಚಾಲಕ ಮಾಡುವ ಸಣ್ಣ ಎಡವಟ್ಟು ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಮತ್ತೊಂದು ನಿದರ್ಶನ ದೊರೆತಿದ್ದು, ಭೀಕರ ಕಾರು ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಕರ್ನಾಟಕದ ಮಂಡ್ಯ ಜಿಲ್ಲೆ ಬೆಳ್ಳೂರು ಸಮೀಪ ಭಾನುವಾರ ಮಧ್ಯಾಹ್ನ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಶೋಭಾ ರಾಣಿ ಈ ಬಗ್ಗೆ ಮಾಹಿತಿ ನೀಡಿದ್ದು, ಸುಧಾ ಜೈನ್, ಅವರ ಪತಿ, ಪುತ್ರ ಹಾಗೂ ಸೊಸೆ ಸೇರಿದಂತೆ ನಾಲ್ವರು ಸ್ವಿಫ್ಟ್ ಕಾರಿನಲ್ಲಿ ಶ್ರವಣಬೆಳಗೊಳದಿಂದ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದರು.
ಈ ವೇಳೆ ಚಾಲಕ ಪೆಟ್ರೋಲ್ ಬಂಕ್ಗೆ ಪ್ರವೇಶಿಸಲು ಎಡಕ್ಕೆ ತಿರುವು ಪಡೆಯಲು ಮುಂದಾಗಿದ್ದಾರೆ. ಆದರೆ ಹಿಂದಿನಿಂದ ಬರುತ್ತಿದ್ದ ವಾಹನವನ್ನು ಗಮನಿಸದೇ ತಿರುವು ಪಡೆದಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಹಿಂದಿನಿಂದ ಬಂದ ಟೊಯೊಟಾ ಹಿಲಕ್ಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರೂ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸುಧಾ ಜೈನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮತ್ತೊಂದು ಕಾರಿನಲ್ಲಿದ್ದವರಿಗೂ ಗಾಯ
ಉಳಿದ ಮೂವರು ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಲಕ್ಸ್ ವಾಹನದ ಚಾಲಕ ವಿಕಾಸ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮೃತ ಸುಧಾ ಜೈನ್ ಮೂಲತಃ ಗುಜರಾತ್ನವರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
‘ಓವರ್ಟೇಕ್ ಎಡವಟ್ಟು, ಮೂರೇ ಸೆಕೆಂಡ್ ನಲ್ಲಿ ದುರಂತ!’
ಪ್ರಸ್ತುತ ಈ ಅಪಘಾತದ ದೃಶ್ಯ ಹಿಂದಿನಲ್ಲಿ ಬಂದ ಕಾರೊಂದರ ಡ್ಯಾಶ್ ಕ್ಯಾಮ್ ನಲ್ಲಿ ಸೆರೆಯಾಗಿದ್ದು, ಬೆಳ್ಳೂರು ಕ್ರಾಸ್ ಸಮೀಪದ ಬೆಂಗಳೂರು–ಮಂಗಳೂರು ಹೆದ್ದಾರಿಯಲ್ಲಿ ನಡೆದ ಮತ್ತೊಂದು ಅಪಾಯಕಾರಿ ಚಾಲನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ವಿಡಿಯೋದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಪಿಕಪ್ ಟ್ರಕ್ವೊಂದು ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಲು ಮುಂದಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ಮುಂದಿದ್ದ ಕಾರು ಏಕಾಏಕಿ ಎಡಕ್ಕೆ ಬಂದಿದೆ. ಈ ವೇಳೆ ಹಿಂದಿದ್ದ ಪಿಕಪ್ ಟ್ರಕ್ ಕಾರಿಗೆ ಢಿಕ್ಕಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಮಹಿಳೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಅಂತೆಯೇ ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ.
ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ
ಇನ್ನು “ಎಚ್ಚರಿಕೆಯಿಲ್ಲ, ಪ್ರತಿಕ್ರಿಯಿಸಲು ಸಮಯವೂ ಇಲ್ಲ. ತಪ್ಪಾದ ವೇಗದಲ್ಲಿ ಕಾರು ಚಾಲಕ ತೆಗೆದುಕೊಂಡ ಒಂದು ಕೆಟ್ಟ ನಿರ್ಧಾರವೇ ಇದಕ್ಕೆ ಕಾರಣ” ಎಂದು ವಿಡಿಯೋ ಹಂಚಿಕೊಂಡವರು ಹೇಳಿದ್ದಾರೆ.
ಹೆದ್ದಾರಿಯಲ್ಲಿ ಓವರ್ಟೇಕ್ ಮಾಡುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು. “ಈ ಬಾರಿ ಮಾತ್ರ ಏನಾಗಲ್ಲ” ಎಂಬ ಮನಸ್ಥಿತಿಯಲ್ಲಿ ಮಾಡುವ ಓವರ್ಟೇಕ್ ಜೀವಕ್ಕೆ ಅಪಾಯ ತರಬಹುದು ಎಂದು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಗಿದೆ.
ವೇಗಕ್ಕಿಂತ ಜೀವ ಮುಖ್ಯ ಹೆದ್ದಾರಿಯಲ್ಲಿ ಓವರ್ಟೇಕ್ ಮಾಡುವಾಗ ಎಚ್ಚರ ವಹಿಸಿ ಎಂದು ಮನವಿ ಮಾಡಿದ್ದಾರೆ.