

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ತಮ್ಮ ಬ್ಯಾರಕ್ ಬದಲಾವಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಕೋರ್ಟ್ ಅಸ್ತು ಎಂದಿದೆ. ಇದೀಗ ಈ ಅರ್ಜಿಗೆ ಸಂಬಂಧಿಸಿದಂತೆ ಪವಿತ್ರಾ ಗೌಡಗೆ ಸಿಹಿ ಸುದ್ದಿ ಸಿಕ್ಕಿದ್ದು, ಅಗತ್ಯವಿದ್ದರೆ ಬೇರೆ ಬ್ಯಾರಕ್ಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ನಗರದ 59ನೇ ಸೆಷನ್ಸ್ ಕೋರ್ಟ್ ಸೂಚನೆ ನೀಡಿದೆ.
ಬ್ಯಾರಕ್ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳನ್ನು ಇರಿಸಲಾಗಿದ್ದು, ಸುಮಾರು 20 ಕೈದಿಗಳಿಗೆ ಅವಕಾಶವಿರುವ ಜಾಗದಲ್ಲಿ 30 ಕೈದಿಗಳನ್ನು ಇರಿಸಲಾಗಿದೆ. ಅಲರ್ಜಿ ಮತ್ತು ಸೋಂಕಿನಿಂದಾಗಿ ಸಾಮಾನ್ಯ ಕೈದಿಗಳಿದ್ದ ಸೆಲ್ನಲ್ಲಿ ಇರಲು ತೊಂದರೆಯಾಗುತ್ತಿದೆ ಎಂದು ಪವಿತ್ರಾ ಗೌಡ ಪರ ವಕೀಲರು ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆರೋಗ್ಯದ ವಿಚಾರದಲ್ಲಿ ಸಮಸ್ಯೆ ಎದುರಾದರೆ ಬ್ಯಾರಕ್ ಬದಲಾಯಿಸುವಂತೆ ಸೂಚನೆ ನೀಡಿದೆ. ಜೈಲು ಕೈಪಿಡಿ ಅನುಸಾರ ಕ್ರಮ ಕೈಗೊಳ್ಳುವಂತೆಯೂ 59ನೇ ಸಿಸಿಎಚ್ ಕೋರ್ಟ್ ಆದೇಶಿಸಿದೆ.
ಜೈಲಿನಲ್ಲಿನ ವಾತಾವರಣದಿಂದ ಪವಿತ್ರಾ ಗೌಡಗೆ ನಿದ್ದೆ ಮತ್ತು ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿವೆ. ಕೆಲವು ಕೈದಿಗಳು ರಾತ್ರಿಯಿಡೀ ನಿದ್ದೆ ಮಾಡದೆ ಇರುವುದರಿಂದ ತಮಗೂ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ತೀವ್ರ ತಲೆನೋವಿನಿಂದ ಬಳಲುತ್ತಿರುವುದಾಗಿ ಮತ್ತು ನಿರಂತರವಾಗಿ ಸರಿಯಾಗಿ ನಿದ್ದೆ ಮಾಡದಿರುವುದರಿಂದ ಮಾನಸಿಕ ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗುತ್ತಿರುವುದಾಗಿ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಪವಿತ್ರಾ ಗೌಡ ಅವರ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್, ಅಗತ್ಯವಿದ್ದರೆ ಆರೋಗ್ಯದ ಸಮಸ್ಯೆಯನ್ನು ಪರಿಗಣಿಸಿ ಬೇರೆ ಬ್ಯಾರಕ್ಗೆ ಸ್ಥಳಾಂತರಿಸಲು ಸೂಚಿಸಿದೆ.