

ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದ ಕಾರಣ ಅವರಿಗೆ ವಿಧಾನಸೌಧದಲ್ಲೇ ಚಿಕಿತ್ಸೆ ನೀಡಲಾಗಿದೆ.
ನಿರಂತರ ಕೆಲಸದ ಒತ್ತಡ ಮತ್ತು ಓಡಾಟದ ದಣಿವಿನಿಂದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಕ್ತದೊತ್ತಡದಲ್ಲಿ ಇಂದು ವಿಧಾನಸೌಧದಲ್ಲಿ ಏರುಪೇರು ಉಂಟಾಗಿತ್ತು. ತಕ್ಷಣವೇ ವೈದ್ಯರು ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಡಿ.ಕೆ.ಶಿ ಅವರ ಆರೋಗ್ಯ ಚೇತರಿಸಿದ್ದು, ಸಹಜ ಸ್ಥಿತಿಗೆ ಮರಳಿದೆ.
ಇಂದು ಮಧ್ಯಾಹ್ನ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ, ಡಿ.ಕೆ. ಶಿವಕುಮಾರ್ ಅವರಿಗೆ ಅಲ್ಪ ಸುಸ್ತು ಹಾಗೂ ವ್ಯತ್ಯಾಸ ಕಂಡುಬಂದಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣವೇ ವಿಧಾನಸೌಧದ ವೈದ್ಯರನ್ನು ಕರೆಸಲಾಯಿತು.
ಸಿಎಂ ಕಚೇರಿಗೆ ಆಗಮಿಸಿದ ವೈದ್ಯರ ತಂಡ ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ತಪಾಸಣೆ ನಡೆಸಿದಾಗ ಪ್ರಾಥಮಿಕ ತಪಾಸಣೆಯಲ್ಲಿ ರಕ್ತದೊತ್ತಡದಲ್ಲಿ ಏರುಪೇರಾಗಿರುವುದು ಕಂಡುಬಂದಿದೆ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆದ ನಂತರ ಈಗ ಅವರ ರಕ್ತದೊತ್ತಡ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿದುಬಂದಿದೆ.
ಸಿಎಂ ಡಿಕೆ ಶಿವಕುಮಾರ್, ನಿನ್ನೆಯಿಂದ ರಾಜ್ಯದ ವಿವಿಧೆಡೆ ತೀವ್ರ ಪ್ರಯಾಣ ನಡೆಸಿದ್ದರು. ಇಂದು ಬೆಳಿಗ್ಗೆಯೂ ಸತತ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ನಿರಂತರ ಓಡಾಟ ಮತ್ತು ಕೆಲಸದ ಒತ್ತಡದಿಂದಾಗಿ ರಕ್ತದೊತ್ತಡದಲ್ಲಿ ವ್ಯತ್ಯಾಸ ಉಂಟಾಗಿತ್ತು.