ಬೆಂಗಳೂರಿಗರ ಟ್ರಾಫಿಕ್ ಕಷ್ಟಕ್ಕೆ ಡಿಜಿಟಲ್ ಪರಿಹಾರ: ಇನ್ಮುಂದೆ ಒಂದೇ ಕ್ಲಿಕ್‌ನಲ್ಲಿ ಸಿಗಲಿದೆ ಕ್ಯಾಬ್-ಬಿಎಂಟಿಸಿ ಬಸ್ ಮಾಹಿತಿ..!

ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಬಿಎಂಟಿಸಿಯ ನೇರ ಬಸ್‌ ಸಂಚಾರ ಮಾಹಿತಿ ವ್ಯವಸ್ಥೆಯನ್ನು ಖಾಸಗಿ ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೂ ವಿಸ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜಧಾನಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ದೊಡ್ಡ ಡಿಜಿಟಲ್ ಕ್ರಾಂತಿಗೆ ಸಾರಿಗೆ ಇಲಾಖೆ ಮುನ್ನುಡಿ ಬರೆದಿದೆ. ಓಲಾ, ಉಬರ್, ನಮ್ಮ ಯಾತ್ರಿ ಮತ್ತು ರ‍್ಯಾಪಿಡೋ ಮುಂತಾದ ಖಾಸಗಿ ಟ್ಯಾಕ್ಸಿ ಹಾಗೂ ಆಟೋ ಆಪ್‌ಗಳನ್ನು ಬಳಸುವ ಗ್ರಾಹಕರು ಇನ್ಮುಂದೆ ಬಿಎಂಟಿಸಿ ಬಸ್‌ಗಳ ನೈಜ-ಸಮಯದ ಚಲನವಲನವನ್ನು (Live Tracking) ತಾವಿದ್ದ ಜಾಗದಿಂದಲೇ ವೀಕ್ಷಿಸಬಹುದು.

ವಿಧಾನಸೌಧದಲ್ಲಿ ನಡೆದ ಸಾರಿಗೆ ಇಲಾಖೆ ಹಾಗೂ ಬಿಎಂಟಿಸಿ ಉನ್ನತಾಧಿಕಾರಿಗಳ ಸಭೆಯಲ್ಲಿ ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಖಾಸಗಿ ಕ್ಯಾಬ್ ಸಂಸ್ಥೆಗಳೊಂದಿಗೆ ಬಿಎಂಟಿಸಿ ನೈಜ-ಸಮಯದ ಡೇಟಾವನ್ನು ಹಂಚಿಕೊಳ್ಳುವಂತೆ ಮಹತ್ವದ ನಿರ್ದೇಶನ ನೀಡಿದ್ದಾರೆ

ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಬಿಎಂಟಿಸಿಯ ನೇರ ಬಸ್‌ ಸಂಚಾರ ಮಾಹಿತಿ ವ್ಯವಸ್ಥೆಯನ್ನು ಖಾಸಗಿ ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೂ ವಿಸ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದರಿಂದ ಆ್ಯಪ್ ಆಧಾರಿತ ಟ್ಯಾಕ್ಸಿಯಿಂದ ಪ್ರಯಾಣ ಮುಗಿಸಿ ಇಳಿದ ಬಳಿಕ, ತಮ್ಮ ಗಮ್ಯಸ್ಥಾನಕ್ಕೆ ತೆರಳಲು ಬಿಎಂಟಿಸಿ ಬಸ್‌ಗಳು ಲಭ್ಯವಿದೆಯೇ ಎಂಬುದನ್ನು ಪ್ರಯಾಣಿಕರು ಸುಲಭವಾಗಿ ಪರಿಶೀಲಿಸಬಹುದಾಗಿದೆ.

ನಗರದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ 200 ಸಣ್ಣ ಹವಾನಿಯಂತ್ರಿತ ವಿದ್ಯುತ್ ಬಸ್‌ಗಳನ್ನು ನಿಯೋಜಿಸುವಂತೆ ಸಚಿವರು ಬಿಎಂಟಿಸಿಗೆ ನಿರ್ದೇಶನ ನೀಡಿದರು.

File photo
ಬೆಂಗಳೂರು: ವಾಯು ವಜ್ರ-ಬಿಎಂಟಿಸಿ ಬಸ್ಸುಗಳ ಡಿಕ್ಕಿ, ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸುತ್ತದೆ: ಸಚಿವ ಭೈರತಿ ಸುರೇಶ್; Video

ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆ ಅಡಿಯಲ್ಲಿ ಬಿಎಂಟಿಸಿ ಖರೀದಿಸುತ್ತಿರುವ 4,500 ವಿದ್ಯುತ್ ಬಸ್‌ಗಳ ಭಾಗವಾಗಿ ಈ ಬಸ್‌ಗಳನ್ನು ನಿಯೋಜಿಸಲಾಗುತ್ತದೆ.

ಈ ಸಣ್ಣ ಹವಾನಿಯಂತ್ರಿತ ಬಸ್‌ಗಳು ಮೆಟ್ರೋ ನಿಲ್ದಾಣಗಳಿಂದ 5 ಕಿ.ಮೀ. ವ್ಯಾಪ್ತಿಯೊಳಗೆ ಸಂಪರ್ಕ ಕಲ್ಪಿಸಲಿವೆ. ವಸತಿ ಬಡಾವಣೆಗಳು ಹಾಗೂ ನಗರದ ಹೊರವಲಯದ ಪ್ರದೇಶಗಳನ್ನು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕಿಸುವಲ್ಲಿ ಈ ಬಸ್‌ಗಳು ಪ್ರಮುಖ ಪಾತ್ರ ವಹಿಸಲಿವೆ.

ಇದಲ್ಲದೆ, ಬೆಂಗಳೂರಿನ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹವಾನಿಯಂತ್ರಿತ ಬಸ್‌ಗಳನ್ನು ಒದಗಿಸುವಂತೆ ಬಿಎಂಟಿಸಿಗೆ ಸೂಚಿಸಲಾಗಿದೆ. ಈ ಕುರಿತು ಐಟಿ-ಬಿಟಿ ಕಂಪನಿಗಳೊಂದಿಗೆ ಚರ್ಚೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com