100 ದಿನ ಸಂಭ್ರಮದಲ್ಲಿ ಡಿಕೆಶಿ ಸರ್ಕಾರ: ಸೆ.10ರಂದು ರಾಜಧಾನಿಯಲ್ಲಿ ಗ್ಯಾರಂಟಿ ಜನೋತ್ಸವ: ಫಲಾನುಭವಿಗಳ ಜೊತೆ ಸಿಎಂ ಮಹತ್ವದ ಸಭೆ..!

ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನಸಾಮಾನ್ಯರನ್ನು ತಲುಪಿರುವ ಕುರಿತು ಸಿಎಂ ಈ ವೇಳೆ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
DK Shivakumar
ಡಿಕೆ ಶಿವಕುಮಾರ್
Updated on

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ನಾಳೆ (ಸೆಪ್ಟೆಂಬರ್ 10) ಅತ್ಯಂತ ಮಹತ್ವದ ದಿನವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಯಶಸ್ವಿಯಾಗಿ 100 ದಿನಗಳ ಆಡಳಿತವನ್ನು ಪೂರೈಸಿದ್ದು, ಈ ಐತಿಹಾಸಿಕ ಮೈಲಿಗಲ್ಲನ್ನು ಸಂಭ್ರಮಿಸಲು ರಾಜಧಾನಿ ಬೆಂಗಳೂರು ಸಜ್ಜಾಗಿದೆ.

ನಾಳೆ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ.

ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನಸಾಮಾನ್ಯರನ್ನು ತಲುಪಿರುವ ಕುರಿತು ಸಿಎಂ ಈ ವೇಳೆ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.

ಸರ್ಕಾರದ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳ ಕುರಿತು ಮಾತನಾಡುವ ಸಾಧ್ಯತೆಯಿದೆ. ಅಲ್ಲದೆ, ಮುಂದಿನ 500 ದಿನಗಳ ತಮ್ಮ ಸರ್ಕಾರದ ದೃಷ್ಟಿಕೋನ ಮತ್ತು ಕಾರ್ಯಯೋಜನೆಯನ್ನೂ ಅವರು ವಿವರಿಸಲಿದ್ದಾರೆಂದು ತಿಳಿದುಬಂದಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ದಿನದಿಂದಲೇ ಆಡಳಿತಕ್ಕೆ ಚುರುಕು ನೀಡಿರುವ ಡಿ.ಕೆ. ಶಿವಕುಮಾರ್, ಸರ್ಕಾರ ಹಲವು ಸವಾಲುಗಳನ್ನು ಎದುರಿಸುತ್ತಿದ್ದರೂ ಅನೇಕ ಹೊಸ ಉಪಕ್ರಮಗಳನ್ನು ಕೈಗೊಂಡಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಂಡ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ, ಶಿವಕುಮಾರ್ ನೇತೃತ್ವದ ಹೊಸ ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೂ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.

DK Shivakumar
100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ;'ಯು-ಟರ್ನ್' ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಆಡಳಿತದಲ್ಲಿ ವಿಳಂಬ ತಪ್ಪಿಸಲು ‘ಪ್ರಜಾ ಸೇವಾ ಇಲಾಖೆ’

ಆಡಳಿತವನ್ನು ಜನಸ್ನೇಹಿಯಾಗಿಸುವುದು ಹಾಗೂ ಅಧಿಕಾರಶಾಹಿಯ ವಿಳಂಬವನ್ನು ಕಡಿಮೆ ಮಾಡುವ ಉದ್ದೇಶದಿಂದ ಶಿವಕುಮಾರ್ ಸರ್ಕಾರ ‘ಪ್ರಜಾ ಸೇವಾ ಇಲಾಖೆ’ಯನ್ನು ಆರಂಭಿಸಿದೆ.

ಈ ಪ್ರತ್ಯೇಕ ಇಲಾಖೆಯ ರಚನೆಯಿಂದ ನಾಗರಿಕ ಸೇವೆಯನ್ನು ಸರ್ಕಾರದ ಪ್ರಮುಖ ಕಾರ್ಯವನ್ನಾಗಿ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೂರುಗಳ ಪರಿಹಾರ ವ್ಯವಸ್ಥೆಯನ್ನು ಕಡತ ವಿಲೇವಾರಿಯಾಗಿದೆಯೇ ಎಂಬುದರ ಆಧಾರದ ಮೇಲೆ ಅಲ್ಲದೆ, ನಾಗರಿಕರ ಸಮಸ್ಯೆ ನಿಜವಾಗಿಯೂ ಪರಿಹಾರವಾಗಿದೆಯೇ ಎಂಬುದರ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು ಎಂದು ಸರ್ಕಾರ ಹೇಳಿದೆ.

ಈ ಹಿಂದಿನ ವ್ಯವಸ್ಥೆಯಲ್ಲಿ ಸಮಸ್ಯೆ ಪರಿಹಾರವಾಗದಿದ್ದರೂ ಕಡತ ವಿಲೇವಾರಿ ಮಾಡಲು ಅವಕಾಶವಿತ್ತು. ಅಲ್ಲದೆ, ದೂರು ತಿರಸ್ಕರಿಸಿದ ಸಂದರ್ಭದಲ್ಲಿ ಕಾರಣಗಳನ್ನು ನೀಡುವ ವ್ಯವಸ್ಥೆಯೂ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಯುವ ಸಬಲೀಕರಣಕ್ಕೆ ‘ಭಾರತ್ ಜೋಡೋ ಯುವ ಸಂಘ’

ಈ ನಡುವೆ ಯುವ ಸಬಲೀಕರಣದ ಭಾಗವಾಗಿ ಸರ್ಕಾರ ‘ಭಾರತ್ ಜೋಡೋ ಯುವ ಸಂಘ’ಗಳನ್ನು ಆರಂಭಿಸಿದೆ.

2027ರ ಮಾರ್ಚ್ 31ರೊಳಗೆ ಒಟ್ಟು 10,000 ಯುವ ಸಂಘಗಳನ್ನು ಆರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದರಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6,000 ಹಾಗೂ ನಗರ ಪ್ರದೇಶಗಳಲ್ಲಿ 4,000 ಸಂಘಗಳನ್ನು ರಚಿಸಲು ಉದ್ದೇಶಿಸಲಾಗಿದೆ.

ಆಗಸ್ಟ್ 31ರ ವೇಳೆಗೆ ಗ್ರಾಮೀಣ ಪ್ರದೇಶಗಳಲ್ಲಿ 6 ಲಕ್ಷ ಸದಸ್ಯರ ಗುರಿಯ ಪೈಕಿ 5,55,762 ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಗರ ಪ್ರದೇಶಗಳಲ್ಲಿ 4 ಲಕ್ಷ ಸದಸ್ಯರ ಗುರಿ ಹೊಂದಲಾಗಿದ್ದು, ಈ ಪೈಕಿ 2,24,000 ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com