

ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ಗೆ ಮೈಸೂರಿನ ಫಾರ್ಮ್ಹೌಸ್ ವಿಚಾರದಲ್ಲಿ ಮತ್ತೊಂದು ಹೊಸ ಕಾನೂನು ಸಂಕಷ್ಟ ಎದುರಾಗಿದೆ. ಹೌದು, ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ಅವರ ಫಾರ್ಮ್ಹೌಸ್ನಲ್ಲಿ ಸಂರಕ್ಷಿತ ಹಾಗೂ ಅಪರೂಪದ ವಲಸೆ ಹಕ್ಕಿಯಾದ ಪಟ್ಟೆ ತಲೆ ಹೆಬ್ಬಾತು ಪಕ್ಷಿಗಳನ್ನು ಕಾನೂನುಬಾಹಿರವಾಗಿ ಪಂಜರದಲ್ಲಿ ಕೂಡಿ ಹಾಕಿ ಸಾಕಿದ ಆರೋಪದ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
ಈ ಹಿಂದೆ ನಟ ದರ್ಶನ್ ನೀಡಿದ್ದ ಸಂದರ್ಶನವೊಂದರ ವಿಡಿಯೋದಲ್ಲಿ ಈ ಅಪರೂಪದ ಹಕ್ಕಿಗಳನ್ನು ಫಾರ್ಮ್ಹೌಸ್ನಲ್ಲಿ ಸಾಕಿರುವುದು ವೈರಲ್ ಆಗಿತ್ತು. ವನ್ಯಜೀವಿ ಕಾಯ್ದೆ 1972 ರ ಅಡಿಯಲ್ಲಿ ಈ ಪಕ್ಷಿಗಳನ್ನು ಅನುಮತಿ ಇಲ್ಲದೆ ಹೊಂದುವುದು ಮತ್ತು ಕೂಡಿ ಹಾಕುವುದು ಅಪರಾಧವಾಗಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪಕ್ಷಿಗಳನ್ನು ವಶಪಡಿಸಿಕೊಂಡು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 9, 39, ಮತ್ತು 51 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಇನ್ನು, ಈ ಅಕ್ರಮ ಪಕ್ಷಿ ಸಾಕಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಫಾರ್ಮ್ಹೌಸ್ ಮ್ಯಾನೇಜರ್ ನಾಗರಾಜ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್ ದಂಪತಿ:
ಟಿ. ನರಸೀಪುರ ನ್ಯಾಯಾಲಯ ನೀಡಿರುವ ಸಮನ್ಸ್ ಮತ್ತು ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ, ತಮ್ಮ ಫಾರ್ಮ್ಹೌಸ್ನಲ್ಲಿ ಈಗಾಗಲೇ ಹಲವು ಸಾಕು ಪ್ರಾಣಿ ಮತ್ತು ಪಕ್ಷಿಗಳನ್ನು ಸಾಕಲಾಗುತ್ತಿದೆ. ಆದರೆ, ಈ ನಾಲ್ಕು ಹೆಬ್ಬಾತುಗಳು ತಾವಾಗಿಯೇ ಹಾರಿ ಬಂದು ಫಾರ್ಮ್ಹೌಸ್ ಆವರಣ ಸೇರಿಕೊಂಡಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಮೇಲಷ್ಟೇ ಅವು ಸಂರಕ್ಷಿತ ವನ್ಯಜೀವಿಗಳು ಎಂಬ ವಿಷಯ ತಮಗೆ ತಿಳಿಯಿತು. ಆದ್ದರಿಂದ ತಮ್ಮ ಮೇಲೆ ದಾಖಲಿಸಿರುವ ಪ್ರಕರಣ ಕೈಬಿಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.
ಒಟ್ಟಾರೆಯಾಗಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಕಾನೂನು ಪ್ರಕ್ರಿಯೆಗಳನ್ನು ಎದುರಿಸುತ್ತಿರುವ ದರ್ಶನ್ ಅವರಿಗೆ, ಈ ವನ್ಯಜೀವಿ ಪ್ರಕರಣ ಹೆಚ್ಚುವರಿ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ, ಈ ಪ್ರಕರಣ ಸಾಭಿತಾದರೆ, ವನ್ಯಜೀವಿ ಕಾಯ್ದೆಯ ನಿಯಮಗಳ ಪ್ರಕಾರ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.