

ಬೆಂಗಳೂರು: ಚಿತ್ರಮಂದಿರದ ಟಿಕೆಟ್ಗಳಿಂದ ಸಂಗ್ರಹವಾಗುವ ಆದಾಯದ ಮೇಲೆ ಶೇ.2ರ ಸೆಸ್ ವಿಧಿಸಲು ಹೊರಡಿಸಿದ್ದ ಸುತ್ತೋಲೆಯನ್ನು ಸೆಪ್ಟೆಂಬರ್ 9ರ ಕಚೇರಿ ಆದೇಶದ ಮೂಲಕ ಹಿಂಪಡೆಯಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ಕರ್ನಾಟಕ ಹೈಕೋರ್ಟ್ಗೆ ತಿಳಿಸಿದೆ.
ಆಕ್ಷೇಪಿತ ಸುತ್ತೋಲೆಯನ್ನು ಜಾರಿಗೊಳಿಸಲು ಆಧಾರವಾಗಿರುವ 2024ರ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ (ಕಲ್ಯಾಣ) ಕಾಯ್ದೆಯ ಜಾರಿಗೆ ಬರುವ ದಿನಾಂಕವನ್ನು ಸರ್ಕಾರ ಇದುವರೆಗೆ ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಗೊಳಿಸಿಲ್ಲ ಎಂದೂ ತಿಳಿಸಿದೆ.
ಆಗಸ್ಟ್ 29ರಂದು ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ನಡೆಸುತ್ತಿದ್ದರು. ಈ ವೇಳೆ ರಾಜ್ಯ ಸರ್ಕಾರ ಹಿಂಪಡೆಯುವ ಆದೇಶದೊಂದಿಗೆ ಮೆಮೊವನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.
ರಾಜ್ಯ ಸರ್ಕಾರದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯ, ಆಕ್ಷೇಪಿತ ಸುತ್ತೋಲೆ ಹಾಗೂ ಅದಕ್ಕೆ ಸಂಬಂಧಿಸಿದ ನೋಟಿಸ್ಗಳನ್ನು ರದ್ದುಗೊಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಮೂಲ ಕಾಯ್ದೆಯೇ ಇನ್ನೂ ಜಾರಿಗೆ ಬಂದಿಲ್ಲದಿರುವಾಗ ಸುತ್ತೋಲೆಗಳ ಮೂಲಕ ಸೆಸ್ ವಿಧಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ರಾಜ್ಯ ವಿಧಾನಮಂಡಲ ಅಂಗೀಕರಿಸಿದ್ದ ಈ ಕಾಯ್ದೆಗೆ ರಾಜ್ಯಪಾಲರು 2024ರ ಸೆಪ್ಟೆಂಬರ್ನಲ್ಲಿ ಅನುಮೋದನೆ ನೀಡಿದ್ದರು.