ವಿಜಯಪುರ: ಬಟ್ಟೆ ಅಂಗಡಿಯಲ್ಲಿ ಸಂಸ್ಕೃತ ದೈನಂದಿನ ವ್ಯಾವಹಾರಿಕ ಭಾಷೆ! ಪ್ರಾಚೀನ ಭಾಷೆಯತ್ತ ಮುಸ್ಲಿಮರು ಫಿದಾ

ಅಷ್ಟೇ ಅಲ್ಲದೆ, ಅಂಗಡಿಯಲ್ಲಿ ಕೆಲಸ ಮಾಡುವ ಮುಸ್ಲಿಂ ಮತ್ತಿತರ ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳು ಕೂಡ ಸಂಸ್ಕೃತದಲ್ಲಿಯೇ ಮಾತನಾಡುತ್ತಾರೆ.
Ramsingh Rajaram Rajput
ರಾಮ್‌ಸಿಂಗ್ ರಾಜಾರಾಮ್ ರಜಪೂತ್
Updated on

ವಿಜಯಪುರ: ವಿಜಯಪುರದ ಜನನಿಬಿಡ ಮೀನಾಕ್ಷಿ ಚೌಕ್ ಪ್ರದೇಶದಲ್ಲಿರುವ 'ಆರ್ ಗಾರ್ಮೆಂಟ್ಸ್' (R Garments) ಎಂಬ ಬಟ್ಟೆ ಅಂಗಡಿಯು, ತನ್ನ ದೈನಂದಿನ ವ್ಯವಹಾರವನ್ನು ಸಂಸ್ಕೃತ ಭಾಷೆಯಲ್ಲಿ ನಡೆಸುವ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದೆ.

ಅಂಗಡಿಯ ಮಾಲೀಕರು, ಅವರ ಕುಟುಂಬದ ಸದಸ್ಯರು ಮತ್ತು ಉದ್ಯೋಗಿಗಳು ಗ್ರಾಹಕರೊಂದಿಗೆ ವ್ಯವಹರಿಸುವಾಗ ಈ ಪ್ರಾಚೀನ ಭಾಷೆಯನ್ನೇ ಬಳಸುತ್ತಾರೆ. ಅಷ್ಟೇ ಅಲ್ಲದೆ, ಅಂಗಡಿಯಲ್ಲಿ ಕೆಲಸ ಮಾಡುವ ಮುಸ್ಲಿಂ ಮತ್ತಿತರ ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳು ಕೂಡ ಸಂಸ್ಕೃತದಲ್ಲಿಯೇ ಮಾತನಾಡುತ್ತಾರೆ.

ಈ ಬಟ್ಟೆ ಅಂಗಡಿಯ ಮಾಲೀಕ ರಾಮ್‌ಸಿಂಗ್ ರಾಜಾರಾಮ್ ರಜಪೂತ್ ಸುಮಾರು ನಾಲ್ಕು ದಶಕಗಳಿಂದ ವಿಜಯಪುರದಲ್ಲಿ ಜವಳಿ ಉದ್ಯಮದಲ್ಲಿದ್ದಾರೆ. ಆರಂಭದಲ್ಲಿ ಸಂಸ್ಕೃತದ ಮೇಲಿನ ಅವರ ಆಸಕ್ತಿ ಮತ್ತು ಭಾಷೆಯನ್ನು ಪ್ರೋತ್ಸಾಹಿಸುವ ಅವರ ಪ್ರಯತ್ನಕ್ಕೆ ಕುಟುಂಬದ ಸದಸ್ಯರಿಂದ ಉತ್ತಮ ಬೆಂಬಲ ಸಿಕ್ಕಿತು. ಕ್ರಮೇಣ ಇದನ್ನು ಅವರ ವ್ಯವಹಾರದಲ್ಲೂ ಅಳವಡಿಸಿಕೊಳ್ಳಲಾಯಿತು.

2004ರಲ್ಲಿ ವಿಜಯಪುರದ ಸ್ಥಳೀಯ ಆಶ್ರಮವೊಂದರಲ್ಲಿ 'ಸಂಸ್ಕೃತ ಭಾರತಿ' ಆಯೋಜಿಸಿದ್ದ 10 ದಿನಗಳ ಸಂಸ್ಕೃತ ಕಲಿಕಾ ಶಿಬಿರದಲ್ಲಿ ಭಾಗವಹಿಸಿದ ನಂತರ ರಾಮ್‌ಸಿಂಗ್ ಈ ಶಾಸ್ತ್ರೀಯ ಭಾಷೆಯನ್ನು ಕಲಿಯಲು ಪ್ರಾರಂಭಿಸಿದರು. ಬಳಿಕ ಅವರು, ಸಂಸ್ಕೃತವನ್ನು ಕೇವಲ ಧಾರ್ಮಿಕ ವಿಧಿವಿಧಾನಗಳು, ಪ್ರಾರ್ಥನೆಗಳು ಅಥವಾ ತರಗತಿ ಕೊಠಡಿಗಳಿಗೆ ಸೀಮಿತಗೊಳಿಸುವ ಬದಲು, ಅದನ್ನು ದೈನಂದಿನ ಜೀವನದಲ್ಲಿ ಬಳಸಲು ಅವರು ನಿರ್ಧರಿಸಿದರು. ಮೊದಲು ತಮ್ಮ ಕುಟುಂಬದ ಸದಸ್ಯರಿಗೆ ಈ ಭಾಷೆಯನ್ನು ಪರಿಚಯಿಸಿದರು. ನಂತರ ತಮ್ಮ ಉದ್ಯೋಗಿಗಳಿಗೆ ಕಲಿಸಲು ಪ್ರಾರಂಭಿಸಿದರು.

"ಸಂಸ್ಕೃತ ಶಿಬಿರದಲ್ಲಿ ಭಾಗವಹಿಸಿದ ನಂತರ, ನನ್ನ ತಂದೆ ನಮ್ಮ ಕುಟುಂಬದ ಸದಸ್ಯರಿಗೆ ಮತ್ತು ನಂತರ ನಮ್ಮ ಉದ್ಯೋಗಿಗಳಿಗೆ ಈ ಭಾಷೆಯನ್ನು ಕಲಿಸಿದರು. ಈಗ ನಾವೆಲ್ಲರೂ ಸಂಸ್ಕೃತದಲ್ಲಿ ಪ್ರಾವೀಣ್ಯತೆ ಹೊಂದಿದ್ದೇವೆ. ಹಿಂದಿ ನಮ್ಮ ಮಾತೃಭಾಷೆಯಾಗಿದ್ದರೂ, ನಾವೆಲ್ಲರೂ ಸಂಸ್ಕೃತದಲ್ಲಿ ಮಾತನಾಡುತ್ತೇವೆ. ನಮ್ಮ ಕುಟುಂಬಕ್ಕೆ ಮದುವೆಯಾಗಿ ಬಂದವರು ಕೂಡ ಈಗ ಸಂಸ್ಕೃತದ ಪರಿಚಯವನ್ನು ಹೊಂದಿದ್ದಾರೆ ಎಂದು ರಾಮ್‌ಸಿಂಗ್ ಅವರ ಪುತ್ರ ರಾಹುಲ್ ಸಿಂಗ್ ರಜಪೂತ್ ಹೇಳಿದರು.

ರಾಮ್‌ಸಿಂಗ್ ಕುಟುಂಬವು ಸುಮಾರು 20 ಹಿಂದೂಗಳು ಮತ್ತು 15 ಮುಸ್ಲಿಮರಿಗೆ ಉದ್ಯೋಗ ನೀಡಿದೆ. ಪ್ರತಿದಿನ ಬೆಳಿಗ್ಗೆ 9 ರಿಂದ 10.30 ರವರೆಗೆ 'ಆರ್ ಗಾರ್ಮೆಂಟ್ಸ್'ನಲ್ಲಿ ಹಾಗೂ ವಿಜಯಪುರದ ಆದರ್ಶ ನಗರದಲ್ಲಿರುವ ರಜಪೂತ್ ಕುಟುಂಬದ ನಿವಾಸವಾದ 'ಸಂಸ್ಕೃತ ಭವನಂ'ನಲ್ಲಿ ಸಂಸ್ಕೃತ ಸಂಭಾಷಣಾ ಅವಧಿಗಳನ್ನು ನಡೆಸಲಾಗುತ್ತದೆ. ಒಂದು ವೇಳೆ 10 ಕ್ಕಿಂತ ಹೆಚ್ಚು ಜನರ ಗುಂಪು ಸಂಸ್ಕೃತ ಕಲಿಯಲು ಆಸಕ್ತಿ ಹೊಂದಿದ್ದರೆ, ಕುಟುಂಬದ ಸದಸ್ಯರು ಆ ಸ್ಥಳಕ್ಕೆ ತೆರಳಿ ಅಲ್ಲಿ ಶಿಬಿರವನ್ನು ನಡೆಸಿಕೊಡುತ್ತಾರೆ.

ಇದರ ಜೊತೆಗೆ, 'ಸಂಸ್ಕೃತ ಭಾರತಿ'ಯ ಸಹಯೋಗದೊಂದಿಗೆ ಈ ಕುಟುಂಬವು ವಿಜಯಪುರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಉಚಿತ ಸಂಸ್ಕೃತ ಕಲಿಕೆ ಹಾಗೂ ಸಂಭಾಷಣಾ ತರಗತಿಗಳನ್ನು ನಡೆಸುತ್ತಿದೆ. ಸಂಸ್ಕೃತ ಭಾರತಿಯ ಉತ್ತರ ಕರ್ನಾಟಕ ಶಾಖೆಯ ಅಧ್ಯಕ್ಷರಾದ ಪ್ರೊ. ಜಿ.ಆರ್. ಅಂಬಲಿ ಕೂಡ ಇದರಲ್ಲಿ ಪಾಲ್ಗೊಂಡಿದ್ದಾರೆ. ರಜಪೂತ ಕುಟುಂಬವು ಪ್ರಮುಖವಾಗಿ ಸಂಭಾಷಣಾ ಸಂಸ್ಕೃತದತ್ತ ಗಮನಹರಿಸಿದರೆ, ಪ್ರೊ. ಅಂಬಲಿ ಅವರು ವ್ಯಾಕರಣವನ್ನು ಬೋಧಿಸುತ್ತಾರೆ. ಅಲ್ಲದೆ, ಸಂಸ್ಕೃತ ಭಾರತಿ ಪ್ರಕಟಿಸಿರುವ ಸಂಸ್ಕೃತ ಕಲಿಯುವವರಿಗಾಗಿಯೇ ಮೀಸಲಾದ ಪುಸ್ತಕದ ಪ್ರತಿಗಳನ್ನು ಈ ಕುಟುಂಬವು ಉಚಿತವಾಗಿ ವಿತರಿಸುತ್ತದೆ.

Ramsingh Rajaram Rajput
ಕವಿತೆಯಿಂದ ರಾಷ್ಟ್ರೀಯ ಗೀತೆಯಾಗುವವರೆಗೆ: ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಮನೆಮನೆಗೆ ತಲುಪಿಸಿದ ವಂದೇ ಮಾತರಂ ಗೀತೆಯ 150 ವರ್ಷಗಳ ಇತಿಹಾಸ

ತಮ್ಮ ಕುಟುಂಬ ನಡೆಸುತ್ತಿರುವ ಉಚಿತ ಸಂಸ್ಕೃತ ತರಗತಿಗಳಿಂದ 5,000ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ ಸಂಸ್ಕೃತ ಕಲಿಯುತ್ತಿರುವ ಅನೇಕ ವಿದ್ಯಾರ್ಥಿಗಳು ತಮ್ಮ ತಂದೆಯನ್ನು ಭೇಟಿಯಾಗಿ ಸಂದೇಹಗಳನ್ನು ಬಗೆಹರಿಸಿಕೊಳ್ಳುತ್ತಾರೆ ಎನ್ನುತ್ತಾರೆ ರಾಹುಲ್. '3R ಗಾರ್ಮೆಂಟ್ಸ್'ನಲ್ಲಿ ಹಿರಿಯ ವ್ಯವಸ್ಥಾಪಕರಾಗಿರುವ ಸಮೀರ್ ಸಾಲೋಟಗಿ, ತಮ್ಮ ಕೆಲಸದ ಸ್ಥಳದಲ್ಲಿ ಸಂಸ್ಕೃತ ಕಲಿತದ್ದು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಸುಧಾರಿಸಿಕೊಳ್ಳಲೂ ನೆರವಾಗಿದೆ. ನನ್ನ ಸಹೋದರಿ ಮತ್ತು ಆಕೆಯ ಮಕ್ಕಳಿಗೆ ಸಂಸ್ಕೃತ ಕಲಿಸಿದೆ. ನಾವು ಉರ್ದು ಭಾಷಿಕರಾಗಿದ್ದರೂ, ಸಂಸ್ಕೃತ ಈಗ ನಮ್ಮ ಕುಟುಂಬದ ಒಂದು ಭಾಗವಾಗಿದೆ ಎಂದು ಹೇಳಿದರು.

ಸಂಸ್ಕೃತ ಒಂದು ಪ್ರಾಚೀನ ಭಾಷೆ. ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಜ್ಞಾನವು ಇದರೊಂದಿಗೆ ಆಳವಾಗಿ ಬೆಸೆದುಕೊಂಡಿವೆ. ಸಂಸ್ಕೃತದಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದಿದ್ದರೆ, ಜನರು ಇತರ ಭಾರತೀಯ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು ಮತ್ತು ಮಾತನಾಡಬಹುದು ಎಂದು ರಾಹುಲ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com