

ಕಮಲಾಪುರ: ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ನಲ್ಲಿ ಪೊಲೀಸ್ ಪೇದೆಯೊಬ್ಬ ನಡು ಬೀದಿಯಲ್ಲೇ ಮಹಿಳೆ ಮೇಲೆ ಹಲ್ಲೆ ಮಾಡಿ ಮನೆಯ ಬಾಗಿಲು ಮುರಿದು ಚಿಂದಿ ಬಟ್ಟೆಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಚಿಂಚೋಳಿ ಠಾಣೆಯ ಪೇದೆ ರಾಜಶೇಖರ ವರನಾಳ ಎಂಬಾತ ಈ ಕೃತ್ಯ ಎಸಗಿದ್ದಾರೆ. ಈ ಹಿಂದೆ ಈತ ಮಹಾಗಾಂವ ಪೊಲೀಸ್ ಠಾಣೆಯಲ್ಲಿ 3-4 ವರ್ಷ ಸೇವೆ ಸಲ್ಲಿಸಿದ್ದ. ಮಹಾಗಾಂವ ಕ್ರಾಸ್ನಲ್ಲಿ ಮಹಿಳೆಯ ಜತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಮಹಿಳೆಯ ಸಂಬಂಧಿಕರು ದೂರು ನೀಡಿದ್ದಕ್ಕೆ ಚಿಂಚೋಳಿ ಠಾಣೆಗೆ ಆತನನ್ನು ವರ್ಗಾವಣೆ ಮಾಡಲಾಗಿತ್ತು.
ಬಳಿಕ ರಾಜಶೇಖರ ಮಕ್ಕಳ ಶಾಲೆಯ ನೆಪದಲ್ಲಿ ಮಹಾಗಾಂವ ಕ್ರಾಸ್ನಲ್ಲಿ ವಾಸವಾಗಿದ್ದು, ಭಾನುವಾರ ಸಂಜೆ ಮಹಿಳೆಯನ್ನು ಜೊತೆಗೆ ಕರೆದುಕೊಂಡು ಹೋಗಿ ನಡು ರಸ್ತೆಯಲ್ಲಿ ಹಲ್ಲೆ ಮಾಡಿದ್ದಾನೆ. ಬಂಡೆಗಲ್ಲು ಎತ್ತಿಹಾಕಿ ಬಾಗಿಲು ಮುರಿದು ಮನೆಗೆ ನುಗ್ಗಿ ಚಿಂದಿ ಬಟ್ಟೆ, ಪ್ಲಾಸ್ಟಿಕ್ ಕಾಗದಗಳಿಗೆ ಬೆಂಕಿ ಹಚ್ಚಿದ್ದಾನೆ. ಇದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರಿಗೆ ಆಕೆ ನನಗೆ 10 ಲಕ್ಷ ರೂ. ಹಣ, ಬಂಗಾರ ಕೊಡಬೇಕು. ಕೇಳಿದರೆ ಏನು ಇಲ್ಲ ಎನ್ನುತ್ತಿದ್ದಾಳೆ, ಆದ್ದರಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾನೆ. ಮಹಿಳೆಯ ಪತಿ ಮಹಾಗಾಂವ ಠಾಣೆಗೆ ದೂರು ನೀಡಿದ್ದಾರೆ.
ಇನ್ನೂ ಪ್ರಕರಣದಲ್ಲಿ ಪೇದೆ ರಾಜಶೇಖರ ವಿರುದ್ಧ ಮಹಾಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯಿತು. ಇದರಿಂದ ಕುಪಿತಗೊಂಡ ಆತ ನಾನು ಇಲ್ಲಿಯೇ ಕೆಲಸ ಮಾಡಿದ್ದೇನೆ.
ನನ್ನ ಮೇಲೆ ಕೇಸ್ ದಾಖಲಿಸಿಕೊಳ್ಳುವುದು ಸರಿಯಲ್ಲ ಎಂದು ಪಿಎಸ್ಐ ಬಸವರಾಜ ಚಿತ್ತಕೋಟಗೆ ಆರೋಪಿ ಆವಾಜ್ ಹಾಕಿದ್ದಾನೆ. ಮಾತಿನ ಚಕಮಕಿ ನಡೆದಿದ್ದು, ಇದನ್ನು ಸಹಿಸದ ರಾಜಶೇಖರ ಪಿಎಸ್ಐ ಕಾರಿಗೂ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.