

ಬೆಂಗಳೂರು: ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು ಎಲ್ಲಾ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ ಸರ್ಕಾರ ಖಡಕ್ ಸೂಚನೆ ನೀಡಿದೆ. ಇದರ ಬೆನ್ನಲ್ಲೇ, ಇ-ಕೆವೈಸಿ ಮಾಡಿಸಲು ಜನರು ತಮ್ಮ ಕೆಲಸ ಕಾರ್ಯ ಬಿಟ್ಟು ನ್ಯಾಯಬೆಲೆ ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಅತಿಯಾದ ಜನದಟ್ಟಣೆ ಮತ್ತು ಸರ್ವರ್ ಡೌನ್ ಸಮಸ್ಯೆಯಿಂದಾಗಿ ಭಾರೀ ಹೈರಾಣಾಗಿದ್ದಾರೆ. ಹಾಗಾಗಿ, ರಾಜ್ಯಸರ್ಕಾರವು ಇ-ಕೆವೈಸಿ ಪೂರ್ಣಗೊಳಿಸಲು ಇದ್ದ ಕೊನೆಯ ದಿನಾಂಕವನ್ನು ಅಕ್ಟೋಬರ್ 20 ರವರೆಗೆ ವಿಸ್ತರಿಸಿ ಮಹತ್ವದ ಆದೇಶ ಹೊರಡಿಸಿತ್ತು. ಆದರೂ, ತಮ್ಮ ಕೆಲಸ ಕಾರ್ಯ ಬಿಟ್ಟು ಕ್ಯೂ ನಿಲ್ಲಬೇಕಲ್ಲ ಎಂದು ನ್ಯಾಯಬೆಲೆ ಅಂಗಡಿಯ ಗ್ರಾಹಕರಲ್ಲಿ ಬೇಸರವಿತ್ತು. ಆದರೆ, ಇದಕ್ಕೆ ಪರಿಹಾರ ಕಂಡುಕೊಂಡಿರುವ ಸರ್ಕಾರ, ನ್ಯಾಯಬೆಲೆ ಅಂಗಡಿಗಳ (ರೇಷನ್ ಅಂಗಡಿ) ಕಾರ್ಯನಿರ್ವಹಣಾ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಇನ್ಮೇಲೆ ರೇಷನ್ ಅಂಗಡಿಗಳಿಗೆ ಹೊಸ ಟೈಮ್!
ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ದುಡಿಯುವ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅವರು, ಅಕ್ಟೋಬರ್ 1, 2026 ರಿಂದ ರಾಜ್ಯಾದ್ಯಂತ ಅಧಿಕೃತವಾಗಿ ಜಾರಿಗೆ ಬರುವಂತೆ, ನ್ಯಾಯಬೆಲೆ ಅಂಗಡಿಗಳ ಸಮಯವನ್ನು 8 ಗಂಟೆಗಳ ಕಾಲ ಎರಡು ಶಿಫ್ಟ್ಗಳಲ್ಲಿ ಕಾರ್ಯನಿರ್ವಹಿಸುವಂತೆ ಸಮಯ ಬದಲಾವಣೆ ಮಾಡಿದ್ದಾರೆ.
ರೇಷನ್ ಅಂಗಡಿಗಳಿಗೆ ದಿನಕ್ಕೆ 2 ಶಿಫ್ಟ್
ಬೆಳಗಿನ ಶಿಫ್ಟ್: ಬೆಳಿಗ್ಗೆ 7:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ.
ಸಂಜೆಯ ಶಿಫ್ಟ್: ಸಂಜೆ 4:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ.
ಈ ಬದಲಾವಣೆಗೆ ಪ್ರಮುಖ ಕಾರಣವೇನು?
ಈ ಹಿಂದೆ ರೇಷನ್ ಅಂಗಡಿಗಳ ಸಮಯದಿಂದಾಗಿ ಕಾರ್ಮಿಕ ವರ್ಗದ ಜನರು ತಮ್ಮ ಇಡೀ ದಿನದ ಕೆಲಸ ಮತ್ತು ಕೂಲಿಯನ್ನು ಕಳೆದುಕೊಂಡು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗುತ್ತಿತ್ತು. ಆದರೆ, ಹೊಸ ಸಮಯದಿಂದಾಗಿ ಕಾರ್ಮಿಕರು ಕೆಲಸಕ್ಕೆ ಹೋಗುವ ಮುನ್ನ ಅಥವಾ ಕೆಲಸ ಮುಗಿಸಿ ಬಂದ ನಂತರ ತಮ್ಮ ಅನುಕೂಲಕ್ಕೆ ತಕ್ಕಂತೆ ಪಡಿತರ ಪಡೆಯಬಹುದು.
ಮುಂದುವರೆದು, ಹೊಸ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಸೂಚಿಸಿದೆ. ನಿಗದಿಪಡಿಸಿದ ಸಮಯಕ್ಕೆ ಅಂಗಡಿಗಳನ್ನು ತೆರೆಯದಿದ್ದರೆ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದರೆ ಅಂತಹ ವಿತರಕರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.