

ಹಾವೇರಿ: ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ್ದ ಆರೋಪದಡಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯದ ಸಕ್ಕರೆ– ಜವಳಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಸುಮಾರು ₹3 ಕೋಟಿ ದಂಡ ವಿಧಿಸಲಾಗಿದೆ.
ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹುಣಸಿಕಟ್ಟಿ ಬಳಿಯಲ್ಲಿ ಕ್ವಾರಿ ನಡೆಸಲು ರುದ್ರಪ್ಪ ಲಮಾಣಿ ಅವರು ಹಲವು ವರ್ಷಗಳ ಹಿಂದೆಯೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿದ್ದಾರೆ. ಅದೇ ಜಾಗದಲ್ಲಿ ಕ್ವಾರಿಯನ್ನೂ ನಡೆಸುತ್ತಿದ್ದಾರೆ.
ಇದೇ ಕ್ವಾರಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಪರವಾನಗಿ ನಿಯಮ ಉಲ್ಲಂಘಿಸಿರುವುದನ್ನು ದಾಖಲೆ ಸಮೇತ ಪತ್ತೆ ಮಾಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ರುದ್ರಪ್ಪ ಲಮಾಣಿ ಅವರಿಗೆ ನೋಟಿಸ್ ನೀಡಿದ್ದಾರೆ.
ಆರು ತಿಂಗಳ ಒಳಗಾಗಿ, ಸುಮಾರು ₹ 3 ಕೋಟಿ ದಂಡವನ್ನು ಪಾವತಿಸಬೇಕು ಎಂದು ಸೂಚಿಸಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಕಲ್ಲು ಕ್ವಾರಿ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಈ ಪಟ್ಟಿಯಲ್ಲಿ ಸಚಿವ ರುದ್ರಪ್ಪ ಲಮಾಣಿ ಅವರ ಕಲ್ಲು ಕ್ವಾರಿಯೂ ಸೇರಿದೆ.
ಸುಮಾರು ವರ್ಷಗಳ ಹಿಂದೆಯೇ ರುದ್ರಪ್ಪ ಲಮಾಣಿ ಅವರು ತಮ್ಮ ಹೆಸರಿನಲ್ಲಿಯೇ ಕ್ವಾರಿಗೆ ಅನುಮತಿ ಪಡೆದುಕೊಂಡಿದ್ದಾರೆ. ಪರವಾನಗಿ ಮೀರಿ, ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ಹೊರತೆಗೆದು ಸಾಗಿಸಿರುವುದು ಗೊತ್ತಾಗಿದೆ. ಹೀಗಾಗಿ, ಅವರಿಗೆ ಇತ್ತೀಚೆಗೆ ನೋಟಿಸ್ ನೀಡಲಾಗಿದೆ. ಮೂರು ಕಂತುಗಳನ್ನು ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಗಳು ತಿಳಿಸಿವೆ.
ಪುಲಿಕೇಶಿ ಹಾಗೂ ಪರಮೇಶ್ವರಪ್ಪ ಶಿವಣ್ಣನವರ ಅವರು ಕಲ್ಲು ಕ್ವಾರಿ–ಕ್ರಷರ್ ನಡೆಸಲು ಪರವಾನಗಿ ಪಡೆದುಕೊಂಡಿದ್ದಾರೆ. ಅವರು ಸಹ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. ಇಬ್ಬರಿಗೂ ಸುಮಾರು 50 ಲಕ್ಷದಷ್ಟು ದಂಡ ವಿಧಿಸಲಾಗಿದೆ ಎಂದು ಇಲಾಖೆಯ ಮೂಲಗಳು ಹೇಳಿವೆ.
ಈ ಕುರಿತು ಹಾವೇರಿ ಜಿಲ್ಲಾ ಕ್ರಷರ್ಸ್ ಹಾಗೂ ಕ್ವಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ವರಾಜ ಬೆಳವಡಿ ಪ್ರತಿಕ್ರಿಯಿಸಿದ್ದು, ʻಸಚಿವ ರುದ್ರಪ್ಪ ಲಮಾಣಿ ಅವರಿಗೂ 3 ಕೋಟಿ ರೂ. ದಂಡ ಬಂದಿದೆ. ಅವರು ಮಂತ್ರಿಗಳಾಗಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿಗಳ ಬಳಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ನಾವು ಹೋರಾಟ ನಡೆಸಿದ ಬಳಿಕವಷ್ಟೇ ಈ ವಿಚಾರಗಳು ಬಯಲಿಗೆ ಬರುತ್ತಿವೆ ಎಂದು ಅವರು ಹೇಳಿದ್ದಾರೆ.
ನಿಯಮ ಉಲ್ಲಂಘನೆಯಾಗಿರುವುದು ತಪ್ಪು ಎಂದು ಅವರೂ ಒಪ್ಪಿಕೊಂಡಿದ್ದಾರೆ. ಆದರೆ ಸರ್ಕಾರ ಅವರದ್ದೇ ಆಗಿರುವುದರಿಂದ ರುದ್ರಪ್ಪ ಲಮಾಣಿ ಅವರು ಈ ವಿಚಾರದಲ್ಲಿ ಅಸಹಾಯಕರಾಗಿದ್ದಾರೆ ಎಂದು ವರಾಜ ಬೆಳವಡಿ ಆರೋಪಿಸಿದ್ದಾರೆ.