ಬಾಬಾ ರಾಂಪಾಲ್ ಬಂಧನ ಪುರಾಣ

ಬಾಬಾ ರಾಂಪಾಲ್ ಬಂಧನ
ಬಾಬಾ ರಾಂಪಾಲ್ ಬಂಧನ

ದೇಶದ ದುರಾಚಾರಿ ಬಾಬಾಗಳ ಇತಿಹಾಸದಲ್ಲಿಯೇ ಹರ್ಯಾಣದ ಸಾತ್‌ಲೋಕ್ ಆಶ್ರಮದ ಬಾಬಾ ರಾಂಪಾಲ್ ಹೆಸರು ಬಹುಶಃ ಹೆಚ್ಚುದಿನ ನೆನಪಿನಲ್ಲಿ ಉಳಿಯಬಹುದು. ಆಶ್ರಮದಲ್ಲಿ ತನ್ನ ವಿರೋಧಿಗಳ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧನಕ್ಕೀಡಾಗಬೇಕಿದ್ದ ಬಾಬಾ ರಾಂಪಾಲ್ ತನ್ನ ಭಕ್ತರನ್ನೇ ತಡೆಗೋಡೆಯಾಗಿ ಬಳಸಿಕೊಂಡಿದ್ದ. ಬಾಬಾ ರಾಂಪಾಲ್ ಬಂಧನಕ್ಕೆ ಹರ್ಯಾಣ ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಭಕ್ತರ ತೀವ್ರ ವಿರೋಧದಿಂದಾಗಿ ಅದು ಸಾಧ್ಯವಾಗಿರಲಿಲ್ಲ.

ಈ ವಿಚಾರವಾಗಿ ಪೊಲೀಸರ ಅಸಮರ್ಥತೆಯಿಂದ ತೀವ್ರ ಕೋಪಗೊಂಡಿದ್ದ ನ್ಯಾಯಾಲಯ ರಾಂಪಾಲ್‌ನನ್ನು ಬಂಧಿಸಿ ಕರೆತನ್ನಿ ಇಲ್ಲವಾದಲ್ಲಿ ನೀವೇ ಬಂದು ಕಟೆಕಟೆಯಲ್ಲಿ ನಿಲ್ಲಿ ಎಂದು ಖಾರವಾಗಿ ಹೇಳಿತ್ತು. ನ್ಯಾಯಾಲಯದ ಅಂತಿಮ ಎಚ್ಚರಿಕೆಯಿಂದ ತೀವ್ರ ಮುಜುಗರಕ್ಕೀಡಾದ ಹರ್ಯಾಣ ಪೊಲೀಸ್ ಇಲಾಖೆ ಸಿಆರ್‌ಪಿಎಫ್ ಮತ್ತು ತುರ್ತು ಪ್ರಹಾರ ದಳದ ನೆರವಿನಿಂದ ಸುಮಾರು 48 ಗಂಟೆಗಳ ತೀವ್ರ ಕಾರ್ಯಾಚರಣೆ ನಡೆಸಿ ಬಾಬಾಂ ರಾಂಪಾಲ್‌ನನ್ನು ಬಂಧಿಸಿದರು.

ಆದರೆ ಅಷ್ಟು ಹೊತ್ತಿಗಾಗಲೇ ಆಶ್ರಮದಲ್ಲಿ ನಡೆದ ಪೊಲೀಸ್ ಮತ್ತು ಭಕ್ತರ ನಡುವಿನ ವ್ಯಾಪಕ ಹಿಂಸಾಚಾರದಿಂದಾಗಿ ಹತ್ತಾರು ಮಂದಿ ಭಕ್ತರು ಸಾವಿಗೀಡಾಗಿದ್ದರು. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಭಕ್ತರ ಗುಂಪು ಅಥವಾ ಭಕ್ತರ ಸೋಗಿನಲ್ಲಿದ್ದ ಬಾಬಾ ರಾಂಪಾಲ್‌ನ ಹಿಂಬಾಲಕರು ಪರವಾನಗಿ ಸಹಿತ ಪಿಸ್ತೂಲ್‌ಗಳಿಂದ ಪೊಲೀಸರತ್ತ ಗುಂಡು ಹಾರಿಸಿದ್ದರು. ಈ ವೇಳೆ ಹಲವು ಪೊಲೀಸರಿಗೆ ಮತ್ತು ಭಕ್ತರಿಗೆ ಗಾಯಗಳಾಗಿತ್ತು.

ಅಂತಿಮವಾಗಿ ಶತಾಯಗತಾಯ ಬಾಬಾ ರಾಂಪಾಲ್‌ನನ್ನು ಬಂಧಿಸಲೇ ಬೇಕು ಎಂದು ಪಣತೊಟ್ಟಂತಿದ್ದ ಪೊಲೀಸರು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿದ್ದರು. ಬಂಧನ ಕಾರ್ಯಾಚರಣೆ ಬಳಿಕ ರಾಂಪಾಲ್‌ನ ಸಾತ್‌ಲೋಕ್ ಆಶ್ರಮದಲ್ಲಿ ಸಾಕಷ್ಟು ಗೌಪ್ಯ ಮತ್ತು ಸ್ಫೋಟಕ ವಿಚಾರಗಳು ಬಹಿರಂಗವಾಗಿದ್ದವು. ಜಗತ್ತಿನ ಕಣ್ಣಿಗೆ ಧಾರ್ಮಿಕ ಕೇಂದ್ರವಾಗಿದ್ದ ಸಾತ್‌ಲೋಕ್ ಆಶ್ರಮದಲ್ಲಿನ ಹಲವು ರಹಸ್ಯಗಳು ತೆರೆದುಕೊಂಡಿದ್ದವು. ಬಾಬಾ ರಾಂಪಾಲ್‌ನ ಐಶಾರಾಮಿ ಜೀವನ ಮತ್ತು ಆಶ್ರಮದ ಮಹಿಳಾ ಸಿಬ್ಬಂದಿಗಳೊಂದಿಗೆ ಆತ ನಡೆಸಿದ್ದ ಕಾಮ ಪುರಾಣಗಳು ಬಹಿರಂಗವಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com