ಒತ್ತುವರಿ ತೆರವಿನ ಭರವಸೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಶಾಂತಕುಮಾರಿ ಅವರು ಈ ಹಿಂದಿನ ಎಲ್ಲಾ ಮೇಯರ್ಗಳಂತೆ ಕೆಂಪೇಗೌಡ ನಗರದಲ್ಲಿರುವ ಕೆಂಪಾಂಬುದಿ ಕೆರೆಗೆ ಭೇಟಿ ನೀಡಿ, ಅಲ್ಲಿನ ಕಾಮಗಾರಿಗಳನ್ನು ಪರಿಶೀಲಿಸಿದರು.
ಮಂಗಳವಾರ ಬೆಳಿಗ್ಗೆ ಕೆರೆಗೆ ಭೇಟಿ ನೀಡಿದ ಅವರು ಅಲ್ಲಿನ ಕಾಮಗಾರಿ ಕುಂಠಿತವಾಗಿರುವುದು, ಕೆಂಪೇಗೌಡ ಗೋಪುರ ಮುಚ್ಚಿರುವುದು, ಕೊಳಚೆ ನೀರು ಕೆರೆಯೊಳಗೆ ಬರುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಿಂದಿನ ಮೇಯರ್ಗಳಂತೆ ಶಾಂತಕುಮಾರಿಯೂ ಕೆರೆ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದರು. ಕೆರೆಯೊಳಗೆ ಹರಿದು ಬರಿತ್ತಿರುವ ಕೊಳಚೆ ನೀರು ನಿಲ್ಲಿಸುವುದು, ಕೆರೆ ಒತ್ತುವರಿ ತೆರವುಗೊಳಿಸುವುದು, ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಗಳಿಂದ ಹೆಚ್ಚಿನ ಅನುದಾನಕ್ಕೆ ಪತ್ರ ಬರೆಯುವುದು, ಮುಚ್ಚಿರುವ ಗೋಪುರ ಕಾಣುವಂತೆ ಮಾಡುವುದು, ಕಾರಂಜಿ ಉದ್ಘಾಟನೆ ಸೇರಿದಂತೆ ಒಟ್ಟಾರೆ ಕೆರೆಯ ಅಭಿವೃದ್ಧಿಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಮೇಯರ್ ಕೆಂಪಾಂಬುದಿ ಕೆರೆಗೆ ಭೇಟಿ ನೀಡಿ ತಪಾಸಣೆ ನಡೆಸಿ, ಅಭಿವೃದ್ದಿ ಕಾರ್ಯಗಳನ್ನು ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ. ಈ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ನಗರೋತ್ಥಾನ ಯೋದನೆಯಡಿ ಹಣ ಬಿಡುಗಡೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಮಾಡಲಾಗುವುದು.
ಐತಿಹಾಸಿಕ ಕೆರೆ ಅಭಿವೃದ್ಧಿಪಡಿಸಲು ಸರ್ಕಾರದ ಅನುದಾನವನ್ನು ಪಡೆಯಲು ಯತ್ನಿಸಲಾಗುವುದು. 47 ಎಕರೆ ಪ್ರದೇಶದಲ್ಲಿ ಹಬ್ಬಿರುವ ಈ ಐತಿಹಾಸಿಕ ಕೆರೆಗೆ ಕಳೆದ 13 ವರ್ಷಗಳಿಂದ 10 ಕೋಟಿ ವ್ಯಯಿಸಲಾಗಿದೆ. ಆಧರೂ ಹಣಕಾಸಿನ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಕೆರೆ ಅಭಿವೃದ್ಧಿಯಾಗದ ಕಾರಣ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರಪು.
ಕೆಂಪಾಂಬುದು ಕೆರೆಗೆ 5 ಪ್ರದೇಶಗಳಿಂದ ಕೊಳಚೆ ನೀರು ಹರಿದು ಬರುತ್ತಿದೆ. ಇದನ್ನು ತಡೆಗಟ್ಟಲು ಕೆರೆಯ ಸಮೀಪದಲ್ಲಿಯೇ ಎಸ್ಟಿಪಿ ಘಟಕ ನಿರ್ಮಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಲಮಂಡಳಿಯು ಅಂದಾಡು ಪಟ್ಟಿ ಸಿದ್ಧಪಡಿಸಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯಲಿದೆ.
ಸುಮಾರು 15 ವರ್ಷಗಳಿಂದ ಟೆಂಡರ್ ಕರೆಯುವುದಾಗಿ ಹೇಳಿದ್ದ ಜಲಮಂಡಳಿ ಈ ಬಾರಿ ಕ್ರಮಕ್ಕೆಗೊಳ್ಳುವ ನಿರೀಕ್ಷೆಯಿದೆ. ಸುಮಾರು 5 ಎಕರೆ ಕೆರೆ ಜಾಗವನ್ನು ಬಂಡಿಮಹಾಂಕಾಳಮ್ಮ ದೇವಸ್ಥಾನದ ಆಡಳಿತ ಮಂಡಳಿ ಒತ್ತುವರಿ ಮಾಡಿದ್ದು, ಪ್ರಕರಣ ನ್ಯಾಲಯದಲ್ಲಿದೆ ಎಂದು ತಿಳಿಸಿದರು.
ಪಕ್ಕದಲ್ಲಿಯೇ ನಾಡಪ್ರಬು ಕೆಂಪೇಗೌಡರ ಗಡಿಗೋಪುರ ಒತ್ತುವರಿಯಾಗಿರುವುದನ್ನು ಮಂಡು ಆಕ್ರೋಶಗೊಂಡ ಮೇಯರ್, ಶೆಡ್ಗಳನ್ನು ಹಾಕಿ ಗೋಪುರ ಮುಚ್ಚುವಂತಾಗುವವರೆಗೂ ನೋಡಿಕೊಂಡು ಸುಮ್ಮನೆ ಇದ್ದೀರಲ್ಲಾ. ಈ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ?
ಬೆಂಗಳೂರು ಕಟ್ಟಿದ ನಾಡಪ್ರಭುವಿಗೆ ನೀಡುವ ಮಾರ್ಯಾದೆಯೇ ಇದು? ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ತೆರವು ಗೊಳಿಸಲು ಎರಡು ದಿನ ಕಾಲಾವಕಾಶ ಕೊಡುವಂತೆ ಮನವಿ ಮಾಡಿದರು. ಅದಕ್ಕೆ ನಿರಾಕರಿಸಿದ ಮೇಯರ್ ಸಂಜೆಯೊಳಗೆ ಜೆಸಿಬಿ ಯಂತ್ರಗಳಿಂದ ತೆರವುಗೊಳಿಸಿ, ವರದಿ ಸಲ್ಲಿಸುವಂತೆ ಆದೇಶಿಸಿದರು.
ಉಪಮೇಯರ್ ರಂಗಣ್ಣ, ವಾರ್ಡ್ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಗುಣಾ ಬಾಲಕೃಷ್ಣ, ಬಿಬಿಎಂಪಿ ಸದಸ್ಯ ಪಿ.ಎನ್. ಸದಾಶಿವ ಉಪಸ್ಥಿತರಿದ್ದರು.
ಕೆರೆಗೆ ಬರುವ ನೀರನ್ನು ನಿಲ್ಲಿಸುವ ಕೆಲಸ ಜಲಮಂಡಳಿಯಿಂದ ಆಗಬೇಕು. ಆ ನೀರು ನಿಂತಲ್ಲಿ ಸಮಸ್ಯೆ ಬಗೆಹರಿದಂತೆ. ಉಳಿದಂತೆ ಬೇರೆ ಕಾಮಗಾರಿಗಳು ಪ್ರಗತಿಯಲ್ಲಿವೆ.
ರಾಜೇಶ್
ಮುಖ್ಯ ಎಂಜಿನಿಯರ್, ಬಿಬಿಎಂಪಿ.
Advertisement