ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿ ಅವಮಾನಿಸಿರುವ ತೃಣಮೂಲ ಕಾಂಗ್ರೆಸ್ ಲೋಕಸಭಾ ಸದಸ್ಯನ ವರ್ತನೆಯನ್ನು ಖಂಡಿಸಿರುವ ಬಿಜೆಪಿ ಹಾಗೂ ಸಿಪಿಎಂ ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿವೆ.
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪಶ್ಚಿಮ ಬಂಗಾಳದ ಸಂಸದ ಕಲ್ಯಾಣ್ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂಧಿಸಿದ್ದರು. ಈ ಬಗ್ಗೆ ಇಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ಮೋದಿ ವಿರುದ್ಧದ ನಿಂದನೆಯನ್ನು ಯಾರೂ ಒಪ್ಪಿಕೊಳ್ಳುವಂತದಲ್ಲ. ಮೋದಿ ಅವರನ್ನು ಅವಮಾನಿಸಿರುವ ಬ್ಯಾನರ್ಜಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ವೆಂಕಯ್ಯ ನಾಯ್ಡು ಅವರ ಆಗ್ರಹಕ್ಕೆ ಧ್ವನಿಗೂಡಿಸಿದ ಬಿಜೆಪಿ ಲೋಕಸಭಾ ಸದಸ್ಯ ಎಸ್.ಎಸ್ ಅಹ್ಲುವಾಲಿಯಾ ಈ ದೇಶದ ಪ್ರಧಾನಿಯನ್ನು ಆಕ್ಷೇಪಾರ್ಹ ಪದ ಬಳಿಸಿ ನಿಂಧಿಸಿರುವ ಬ್ಯಾನರ್ಜಿ ವರ್ತನೆ ತೀರಾ ಖಂಡನೀಯ. ಬ್ಯಾನರ್ಜಿ ಕ್ಷಮೆಯಾಚಿಸದಿದ್ದರೆ ನಿಲುವಳಿ ಸೂಚನೆ ಮಂಡಿಸಬೇಕಾಗುತ್ತದೆ ಎಂದರು. ಇವರನ್ನು ಸಿಪಿಎಂ ಸದಸ್ಯರೂ ಬೆಂಬಲಿಸಿದರು.
ಈ ಬಗ್ಗೆ ಉತ್ತರಿಸಿದ ಟಿಎಂಸಿ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಈ ಸದನದ ಹೊರಗಡೆ ನಡೆದಿರುವ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದು ಸರಿಯಲ್ಲ ಹಾಗೂ ಯಾವುದೇ ಕಾರಣಕ್ಕೂ ನಾನು ಕ್ಷಮೆಯಾಚಿಸುವುದಿಲ್ಲ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಸದನದ ಹೊರಗಡೆ ನಡೆದಿರುವ ವಿಚಾರವನ್ನು ಇಲ್ಲಿ ಚರ್ಚಿಸುವ ಅಗತ್ಯ ಇಲ್ಲ. ಸದಸ್ಯರು ಮಾತನಾಡುವಾಗ ಎಚ್ಚರ ವಹಿಸುವಂತೆ ಸೂಚಿಸಿದರು.
Advertisement