ಶೀಘ್ರದಲ್ಲೇ 3 ಕೋಟಿ ಜನರಿಗೆ ವಸತಿ: ವೆಂಕಯ್ಯ ನಾಯ್ಡು

ಎಂ ವೆಂಕಯ್ಯ ನಾಯ್ಡು
ಎಂ ವೆಂಕಯ್ಯ ನಾಯ್ಡು

ನವದೆಹಲಿ: ದೇಶದಲ್ಲಿ ಅಂದಾಜು 3 ಕೋಟಿ ಜನರಿಗೆ ವಸತಿ ಒದಗಿಸುವ ಹೊಸ ಯೋಜನೆಯೊಂದನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ಲೋಕಸಭೆಯಲ್ಲಿ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.

ವಸತಿ ಯೋಜನೆ ಪ್ರಸ್ತಾಪವನ್ನು ಶೀಘ್ರದಲ್ಲೇ ಸಚಿವ ಸಂಪುಟ ಮುಂದೆ ಇರಿಸಲಾಗುವುದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ನಾಯ್ಡು ಅವರು ತಿಳಿಸಿದ್ದು, 2022ರ ವೇಳೆಗೆ ಎಲ್ಲರಿಗೂ ಮನೆ ಒದಗಿಸಲು ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ ಎಂದರು.

ನಗರ ಪ್ರದೇಶಗಳ ಬಡವರಿಗೆ ಮನೆ ಒದಗಿಸಲು ಖಾಸಗಿಯವರ ಜತೆಗೂಡಿ ಏಕೀಕೃತ ವಸತಿ ಯೋಜನೆಯನ್ನು ಜಾರಿಗೆ ತರಲಾಗುವುದು. ಖಾಸಗಿಯವರ ಪಾಲುದಾರಿಕೆಗೆ ರಾಜ್ಯ ಸರಕಾರಗಳೂ ಪ್ರೋತ್ಸಾಹ ನೀಡುವಂತೆ ಪ್ರೇರೇಪಿಸಲಾಗುವುದು. ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್‌ ಮಾದರಿಗಳನ್ನು ಅಧ್ಯಯನ ನಡೆಸಿದ ಬಳಿಕ ಕೊಳೆಗೇರಿಗಳ ಪುನರ್ವಸತಿ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪೂರಕ ಪ್ರಶ್ನೆಗೆ  ಉತ್ತರಿಸಿದರು.

ಚೆನ್ನೈನಂತಹ ನಗರಗಳಲ್ಲಿ ಕೊಳೆಗೇರಿ ಜನರಿಗಾಗಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ ಪುನರ್ವಸತಿ ಕಲ್ಪಿಸುವ ತಮಿಳುನಾಡು ಸರಕಾರದ ಯೋಜನೆ ದೇಶಕ್ಕೆ ಮಾದರಿಯಾಗಿದೆ. ವಸತಿಹೀನರಿಗೆ ಚಳಿಗಾಲದಲ್ಲಿ ಬೆಚ್ಚಗಿನ ಆಶ್ರಯ ಒದಗಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಪಾಲಿಸಲು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಸಭೆ ನಡೆಸಲಾಗುವುದು ಎಂದು ನಾಯ್ಡು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com