ಶಾರದಾ ಚಿಟ್‌ಫಂಡ್ ಹಗರಣ: ಸಚಿವ ಮದನ್ ಮಿತ್ರ ಬಂಧನ

ಬಹುಕೋಟಿ ಶಾರದಾ ಚಿಟ್‌ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಮತ್ತು ತೃಣಮೂಲ ಕಾಂಗ್ರೆಸ್...
ಮದನ್ ಮಿತ್ರ
ಮದನ್ ಮಿತ್ರ

ಕೊಲ್ಕತಾ: ಬಹುಕೋಟಿ ಶಾರದಾ ಚಿಟ್‌ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಮುಖಂಡ ಮದನ್ ಮಿತ್ರರನ್ನು ಸಿಬಿಐ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಇಂದು ಬೆಳಗ್ಗೆ ಸಿಬಿಐ ವಿಚಾರಣೆಗೆ ಮದನ್ ಮಿತ್ರ ಆಗಮಿಸಿದ್ದರು. ಸರಿ ಸುಮಾರು 5 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಅಧಿಕಾರಿಗಳು ಮಿತ್ರರನ್ನು ಬಂಧಿಸಿದ್ದಾರೆ.

ಮದನ್ ಮಿತ್ರ ಶಾರದಾ ಗ್ರೂಪ್ ಆಫ್ ಕಂಪನಿ ಮೇಲೆ ತಮ್ಮ ಹಿಡಿತವನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ನವೆಂಬರ್‌ನಲ್ಲಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಅನಾರೋಗ್ಯದ ನೆಪ ಹೇಳಿಕೊಂಡು ವಿಚಾರಣೆಗೆ ಗೈರಾಗುತ್ತಿದ್ದರು. ಹೀಗಾಗಿ ಮದನ್ ಮಿತ್ರರನ್ನು ಇಂದು ಸಂಜೆ ಬಂಧಿಸಿದ್ದಾರೆ. ಕ್ರಿಮಿನಲ್ ಸಂಚು ವಂಚನೆ ಆರೋಪದಡಿ ಮಿತ್ರರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮದನ್ ಮಿತ್ರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತರಾಗಿದ್ದಾರೆ. ಶಾರದಾ ಚಿಟ್‌ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ತೃಣಮೂಲ ಕಾಂಗ್ರೆಸ್‌ನ ಮೂರನೇ ನಾಯಕನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಮಾಜಿ ಸಂಸದರಾದ ಕುನಾಲ್ ಘೋಷ್ ಮತ್ತು ಶ್ರೀನ್‌ಜೋಯ್ ಬೋಸ್‌ರನ್ನು ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com