ನವದೆಹಲಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ಕಲ್ಲಿದ್ದಲು ಬ್ಲಾಕ್ ಹಂಚಿಕೆ ವಿಧೇಯಕಕ್ಕೆ ಶುಕ್ರವಾರ ಲೋಕಸಭೆಯಲ್ಲಿ ಆಂಗೀಕಾರ ದೊರೆತಿದೆ.
ಈ ಮೂಲಕ ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ನಿಂದ ಹಂಚಿಕೆ ರದ್ದಾದ 204 ಕಲ್ಲಿದ್ದಲು ಗಣಿ (ವಿಶೇಷ ನಿಂಬಧನೆಗಳು) ವಿಧೇಯಕಕ್ಕೆ ಶುಕ್ರವಾರ ಧ್ವನಿಮತದ ಮೂಲಕ ಅಂಗೀಕಾರ ಸಿಕ್ಕಿತು. ವಿಧೇಯಕದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಲು ಅದನ್ನು ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂಬ ಕೆಲವು ಪ್ರತಿಪಕ್ಷಗಳು ಒತ್ತಾಯದ ನಡುವೆಯೇ ವಿಧೇಯಕ ಆಂಗೀಕಾರಗೊಂಡಿತು.
ಈ ಬಗ್ಗೆ ಮಾತನಾಡಿದ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್, 'ಹೊಸ ವಿಧೇಯಕವು ಕಲ್ಲಿದ್ದಲು ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ನೆರವಾಗಲಿದೆ. ಈ ಮೂಲಕ ನಾವು ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ ಅನ್ನು ಬಲಿಷ್ಠಗೊಳಿಸುತ್ತಿದ್ದೇವೆ' ಎಂದಿದ್ದಾರೆ. 'ಇಲ್ಲಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯು ಇ-ಹರಾಜು ಮೂಲಕ ನಡೆಯುವ ಕಾರಣ ಪಾರದರ್ಶಕತೆಯು ಹೆಚ್ಚುತ್ತದೆ. ಜತೆಗೆ ಯುಪಿಎ ಸರ್ಕಾರದ ಅವಧಿಯಲ್ಲಾದ ತಪ್ಪುಗಳು ಮರುಕಳಿಸುವುದಿಲ್ಲ' ಎಂದೂ ಅವರು ಹೇಳಿದ್ದಾರೆ.
ಕೋಡಾ, ಮಾಜಿ ಅಧಿಕಾರಿಗಳ ವಿರುದ್ಧ ಆರೋಪ ಪಟ್ಟಿ
ಕೊಲ್ಕತಾ ಮೂಲದ ಸಂಸ್ಥೆಗೆ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್ ಮಾಜಿ ಸಿಎಂ ಮಧು ಕೋಡಾ, ಮಾಜಿ ಮುಖ್ಯಕಾರ್ಯದರ್ಶಿ ಅಶೋಕ್ ಕುಮಾರ್ ಬಸು, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್ಸಿ ಗುಪ್ತಾ ಹಾಗೂ ಇತರೆ ಐವರು ಅಧಿಕಾರಗಳ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದೆ.
ಒಂದೋ ಆರೋಪಪಟ್ಟಿ ಸಲ್ಲಿಸಿ, ಇಲ್ಲವೇ ಸಮಾಪ್ತಿ ವರದಿ ಸಲ್ಲಿಸಿ ಎಂದು ಸುಪ್ರೀಂಕೋರ್ಟ್ ಸಿಬಿಐಗೆ ಆದೇಶಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
Advertisement