ಕೊಟ್ಟಾ: ರಾಜಸ್ಥಾನದಲ್ಲಿ ಬಿಜೆಪಿ ಶಾಸಕನೊಬ್ಬ ಮತ ಹಾಕುವಂತೆ, ಮತದಾರರಿಗೆ ಬೆದರಿಕೆ ಹಾಕುತ್ತಿದ್ದ ದೃಶ್ಯ, ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ರಾಜಸ್ಧಾನದ ಕೊಟ್ಟಾ ತಾಲೂಕಿನ ಲಾತ್ಪುರ ಕ್ಷೇತ್ರದ ಬಿಜೆಪಿ ಶಾಸಕ ಭವಾನಿ ಸಿಂಗ್ ರಜಾವತ್, ಕಳೆದ ತಿಂಗಳು ರಾಜಸ್ಥಾನದಲ್ಲಿ ನಡೆದಿದ್ದ ಕಾರ್ಪೋರೇಷನ್ ಚುನಾವಣೆ ವೇಳೆ, ಮತದಾರರಿಗೆ ಮತ ಚಲಾಯಿಸುವಂತೆ ಬೆದರಿಕೆ ಹಾಕುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಾರಿ ಸುದ್ದಿ ಮಾಡುತ್ತಿದೆ.
ಆ ದೃಶ್ಯದಲ್ಲಿ ಭವಾನಿ ಸಿಂಗ್, ಬಿಜೆಪಿಗೆ ಮತ ಚಲಾಯಿಸದಿದ್ದಲ್ಲಿ ಈ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲ್ಪಟ್ಟಿರುವ ಮನೆಗಳನ್ನು ಧ್ವಂಸಗೊಳಿಸುವುದಾಗಿ ಮತದಾರರಿಗೆ ಧಮ್ಕಿ ಹಾಕುತ್ತಿದ್ದಾರೆ.
ಈ ದೃಶ್ಯದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಭವಾನಿ ಸಿಂಗ್, ನಾನು ಯಾರಿಗೂ ಬೆದರಿಕೆ ಒಡ್ಡಿಲ್ಲ. ನಾನು ಬಡಜನರ ಅಭಿವೃದ್ದಿಯನ್ನು ಬಯಸುವವನು. ಈ ಪ್ರದೇಶದಲ್ಲಿ ವಾಸಿಸಲು ಈ ಜನರಿಗೆ ನಾನೇ ಸಹಾಯ ಮಾಡಿದ್ದೆನು. ಈ ಪ್ರದೇಶದ ಮತ್ತಷ್ಟು ಅಭಿವೃದ್ದಿಗಾಗಿ ಬಿಜೆಪಿಗೆ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದೆನು ಎಂದು ರಾಗ ಬದಲಿಸಿದ್ದಾರೆ.
ಈ ಹಿಂದೆ ಬಿಜೆಪಿ ಶಾಸಕ ಪ್ರಹ್ಲಾದ್ ಗುಂಜಾಲ್, ತಮಗೆ ಪರಿಚಯಸ್ಧ ದಾದಿಯೊಬ್ಬರಿಗೆ ವರ್ಗಾವಣಿ ಮಾಡಿಕೊಡುವಂತೆ ಹಿರಿಯ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದ ಆಡಿಯೋ ರೆಕಾರ್ಡಿಂಗ್ ಬಾರಿ ಚರ್ಚೆಗೆ ಕಾರಣವಾಗಿತ್ತು. ಆ ಸುದ್ದಿ ಮಾಸುವ ಮುನ್ನವೇ ಮತ್ತೊಬ್ಬ ಬಿಜೆಪಿ ಶಾಸಕರ ಧಮ್ಕಿ ದೃಶ್ಯ ಸುದ್ದಿಯಾಗಿದೆ.
Advertisement