ನರಹಂತಕ ಹುಲಿ ಗುಂಡೇಟಿಗೆ ಬಲಿ

ಕಳೆದ ನಾಲ್ಕು ದಿನಗಳಿಂದ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ನರಹಂತಕ ಹುಲಿಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಾಂಬೋಟಿ(ಬೆಳಗಾವಿ): ಕಳೆದ ನಾಲ್ಕು ದಿನಗಳಿಂದ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ನರಹಂತಕ ಹುಲಿಯನ್ನು ಖಾನಾಪುರ ತಾಲೂಕಿನ ಕೊಂಗಳ ಗ್ರಾಮದಲ್ಲಿ ಭಾನುವಾರ ರಾತ್ರಿ 8.15 ಗಂಟೆ ಸುಮಾರಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ನರಹಂತಕ ಹುಲಿಗೆ ಕಾಲರ್ ಐಡಿ ಅಳವಡಿಸಲಾಗಿದ್ದು, ಅದೇ ಹುಲಿ ಎಂದು ಖಚಿತ ಪಡಿಸಿಕೊಂಡ ಬಳಿಕವೇ ಗುಂಡು ಹಾರಿಸಲಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಖಾನಾಪುರ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕವೇ ಹುಲಿಗೆ ಎಷ್ಟು ಗುಂಡು ತಾಗಿವೆ ಎಂಬುದು ಗೊತ್ತಾಗಲಿದೆ. ನಾಲ್ಕು ದಿನಗಳ ಹಿಂದೆ ಜಾಂಬೋಟಿ ಸಮೀಪದ ಮರಗಾಯಿ ಗ್ರಾಮದ ಗರ್ಭಿಣಿ ಮೇಲೆ ದಾಳಿ ಮಾಡಿದ ಬಳಿಕ ಜೀವಂತವಾಗಿ ಹಿಡಿಯಿರಿ ಅಥವಾ ಗುಂಡಿಕ್ಕಿ ಕೊಲ್ಲಿರಿ ಎಂದು ಸರ್ಕಾರ ಆದೇಶ ನೀಡಿತ್ತು. ಬಳಿಕ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ, ಚಾಮರಾಜನಗರ, ಬಂಡಿಪುರ, ದಾಂಡೇಲಿ, ಬಿಳಿಗಿರಿ ರಂಗನಬೆಟ್ಟ, ಹುಲಿ ಸಂರಕ್ಷಣಾ ಪಡೆ, ಶಾರ್ಪ್ ಶೂಟರ್ಸ್ ಸೇರಿದಂತೆ 300ಕ್ಕೂ ಅಧಿಕ ಸಿಬ್ಬಂದಿ ಹಗಲಿರಳು ಕಾರ್ಯಾಚರಣೆ ನಡೆಸುತ್ತಿದ್ದರು. ಇಲ್ಲಿಯವರೆಗೆ 8 ಪ್ರಾಣಿಗಳನ್ನು, ಇಬ್ಬರು ಮಹಿಳೆಯರನ್ನು ಬಲಿ ತೆಗೆದುಕೊಂಡಿದ್ದ ನರ ಭಕ್ಷ ಹುಲಿ ಕೊನೆಗೂ ಅರಣ್ಯ ಇಲಾಖೆಯವರೆ ಗುಂಡೇಟಿಗೆ ಬಲಿಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಸಾರ್ಥಕ ಆಪರೇಷನ್
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಸಿಬ್ಬಂದಿಗೆ ಆ ಹುಲಿಯ ಮೈ ಮೇಲಿನ ಪಟ್ಟಿಗಳ ಬಗ್ಗೆ ಅಧಿಕೃತವಾದ ಭಾವಚಿತ್ರ ನೀಡಿದ್ದರಿಂದ ಅದೇ ಹುಲಿಯನ್ನು ಬೇಟೆಯಾಡಲು ಸುಲಭವಾಯಿತು ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಕೊನೆಗೂ 4 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದಕ್ಕೂ ಸಾರ್ಥಕವಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com